ಡೀಸಿ ರೋಹಿಣಿ ಮೇಲೆ ರೇವಣ್ಣ ಗರಂ
Team Udayavani, Aug 16, 2018, 6:10 AM IST
ಹಾಸನ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ತಾವು ಆಗಮಿಸಿದ ನಂತರ ಬಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ರೇಗಾಡಿದ ಪ್ರಸಂಗ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆಯಿತು.
ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಸಚಿವ ಎಚ್.ಡಿ.ರೇವಣ್ಣರಿಂದ ಧ್ವಜಾರೋಹಣ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸುಮಾರು 10 ನಿಮಿಷ ಮೊದಲೇ ರೇವಣ್ಣ ಆಗಮಿಸಿದರು. ಆದರೆ ಆ ಸಮಯಕ್ಕೆ ಜಿಲ್ಲಾಧಿಕಾರಿ ಬಂದಿರಲಿಲ್ಲ. 9 ಗಂಟೆಗೆ ಕೆಲವೇ ಕ್ಷಣಗಳಿಗೆ ಮೊದಲು ವೇದಿಕೆಗೆ ಆಗಮಿಸಿದ ಜಿಲ್ಲಾಧಿಕಾರಿ ಮೇಲೆ ಗರಂ ಆದ ರೇವಣ್ಣ ಅವರು, ಸಚಿವರು ಬಂದರೂ ಜಿಲ್ಲಾಧಿಕಾರಿಯವರು ಬರುವುದಿಲ್ಲ ಎಂದರೆ ಏನರ್ಥ, ಇಂತಹ ನಡವಳಿಕೆ ನಾನು ಸಹಿಸಲ್ಲ. ಘನತೆಯಿಂದ ನಡೆದುಕೊಳ್ಳಬೇಕೆಂದು ಹೇಳುತ್ತಾ ವೇದಿಕೆಯಲ್ಲಿ ಆಸೀನರಾದರು.
ಬಳಿಕ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ನಂತರ ವೇದಿಕೆಯಲ್ಲಿ 2 ಗಂಟೆ ಪಕ್ಕ ಆಸೀನರಾಗಿದ್ದ ಜಿಲ್ಲಾಧಿಕಾರಿಯವರೊಂದಿಗೆ ಆಗಾಗ್ಗೆ ಮಾಹಿತಿ ಪಡೆಯುತ್ತಾ ಆತ್ಮೀಯವಾಗಿದ್ದರು.