ಮಲೆನಾಡಲ್ಲಿ ಈಗ ಗಾಳಿಯ ಅಬ್ಬರ
Team Udayavani, Aug 19, 2018, 6:45 AM IST
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅನೇಕ ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರ ಕಡಿಮೆಯಾಗಿದೆ ಆದರೆ ಭಾರೀ ಪ್ರಮಾಣದ ಗಾಳಿ ಬೀಸುತ್ತಿದೆ.ಅಲ್ಲಲ್ಲಿ ರಸ್ತೆ ಮತ್ತು ಮನೆಗಳ ಗುಡ್ಡ ಕುಸಿತ ಉಂಟಾಗುತ್ತಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನಿಯಂತ್ರಣಕ್ಕೆ ಬಂದರೂ ಭೂ ಕುಸಿತ ಮುಂದುವರಿದಿರುವುದರಿಂದ ಜನ ಭಯಭೀತಗೊಂಡಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ಬಾವಿಯೊಂದು ಕುಸಿದಿದೆ. ಪ್ರೇಮಾಶೆಟ್ಟಿ ಎಂಬುವರ ಮನೆ ಸಮೀಪದ ಬಾವಿ ಕುಸಿದು ಪಕ್ಕದಲ್ಲೇ ಸುರಂಗದಂತೆ ಮಾರ್ಪಾಡಾಗಿದೆ.
ಕೊಪ್ಪ ತಾಲೂಕಿನ ಹೇರೂರು ಗ್ರಾಮದ ದೂಬಳೆ ಕೈಮರ ಎಸ್ಟೇಟ್ ಸೇರಿದಂತೆ ಐದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತಡೆಗೋಡೆ ಸಹಿತ ಕುಸಿದು ಬಿದ್ದಿದ್ದು, ಸುಮಾರು 20 ಅಡಿ ಆಚೆಗೆ ಸಿಮೆಂಟ್ ತಡೆಗೋಡೆ ಕುಸಿದು ಹೋಗಿದೆ. ರಸ್ತೆ ಕುಸಿಯುತ್ತಿರುವುದರಿಂದ ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಪರ್ಯಾಯ ಮಾರ್ಗವಿಲ್ಲದೆ ಜನರು ಕಂಗಾಲಾಗಿದ್ದಾರೆ.