ಕೊಡಗು ಜಿಲ್ಲೆಗೆ 7 ಕೋಟಿ ರೂ.ನೆರವು: ಕೇಂದ್ರ ಸಚಿವೆ
Team Udayavani, Aug 25, 2018, 6:00 AM IST
ಮಡಿಕೇರಿ: ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸುವುದಕ್ಕೆ ನೆರವಾಗುವಂತೆ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್ನ (ಡಿಪಿಎಸ್ಯು) ಮೂರು ಸಂಸ್ಥೆಗಳ ಮೂಲಕ ಕೊಡಗು ಜಿಲ್ಲೆಗೆ 7 ಕೋಟಿ ರೂ. ನೆರವನ್ನು ನೀಡುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ನೆರವು ಬಿಡುಗಡೆಯನ್ನು ಘೋಷಿಸಿದ ಸಚಿವರು, ಈ ನೆರವನ್ನು ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರ ಪುನರ್ವಸತಿ, ಹಾಳಾದ ರಸ್ತೆ ಸೇರಿದಂತೆ ಇನ್ನಾವುದೇ ಅಗತ್ಯ ಕಾರ್ಯಗಳಿಗೆ ಜಿಲ್ಲಾಡಳಿತ ಬಳಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿದರು.
ಸಂಸದರ ನಿಧಿಯಿಂದ 1 ಕೋಟಿ:
ಇದಷ್ಟೇ ಅಲ್ಲ, ತಮ್ಮ ಸಂಸದರ ನಿಧಿಯಿಂದಲೂ ಕೊಡಗು ಜಿಲ್ಲೆಗೆ ಒಂದು ಕೋಟಿ ನೀಡುತ್ತಿದ್ದೇನೆ. ಇದನ್ನೂ ಜಿಲ್ಲಾಡಳಿತ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಮಡಿಕೇರಿ, ಸೋಮವಾರಪೇಟೆ ತಾಲೂಕಿನ ಸಾಕಷ್ಟು ಗ್ರಾಮಗಳು ಸೇರಿದಂತೆ ಹಲವೆಡೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಅತ್ಯಂತ ಗಂಭೀರ ಸ್ವರೂಪದಲ್ಲಿ ಹಾಳಾಗಿದ್ದು, ಪ್ರಮುಖ ನಗರಗಳ ಜತೆ ರಸ್ತೆ ಸಂಪರ್ಕವನ್ನೇ ಕಳೆದುಕೊಂಡಿವೆ. ಈ ರಸ್ತೆಗಳ ಮರು ಸಂಪರ್ಕದ ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಬಾರ್ಡರ್ ರೋಡ್ ಆರ್ಗನೈಸೇಷನ್(ಬಿಆರ್ಒ)ನ ತಾಂತ್ರಿಕ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಿಕೊಡುತ್ತೇನೆ. ಆ ತಂಡದ ಸಲಹೆ ಸೂಚನೆಗಳನ್ನು, ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದೆಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಅಂದಾಜಿನ ಬಳಿಕ ಪರಿಹಾರ ಘೋಷಣೆ:
ಜಿಲ್ಲೆಯಲ್ಲಾಗಿರುವ ಹಾನಿ ಕುರಿತಂತೆ ಕೇಂದ್ರ ಸರ್ಕಾರದ ನಷ್ಟ ಅಂದಾಜು ತಂಡ ಬಂದು ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಿದ ಬಳಿಕ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾಪನೆಗಳನ್ನು ಆಧರಿಸಿ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ. ಆದಾಗ್ಯೂ ಸದ್ಯ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರಿಗೆ ಮಾಹಿತಿ ನೀಡುತ್ತೇನೆ. ಅಲ್ಲದೆ, ರಸ್ತೆಗಳು ಹಾಳಾಗಿರುವ ಬಗ್ಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೂ ತರುವುದಾಗಿ ಅವರು ಹೇಳಿದರು.
504 ಮಂದಿಯ ರಕ್ಷಣೆ:
ಭಾರತೀಯ ಸೇನೆಯು ಕೊಡಗಿನ ಮುಕ್ಕೋಡ್ಲು, ಕಾಲೂರು ವಿಭಾಗದಲ್ಲಿ ಎರಡು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದ್ದು, ವಿವಿಧ ರಕ್ಷಣಾ ಪಡೆಗಳು ಆಗಸ್ಟ್ 18 ರಿಂದ ಇಲ್ಲಿಯವರೆಗೆ ಸಂಕಷ್ಟದಲ್ಲಿ ಸಿಲುಕಿದ್ದ 504 ಮಂದಿಯನ್ನು ರಕ್ಷಿಸಿವೆ. ಇದೇ ಆಗಸ್ಟ್ 20 ರ ಬಳಿಕ ರಾಜ್ಯ ಸರ್ಕಾರದಿಂದ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಯಾವುದೇ ಮನವಿಗಳು ಬಂದಿಲ್ಲವೆಂದು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಭಾರತೀಯ ವಾಯುಸೇನೆಯ ಎಂಐ-17 ವಿಮಾನದ ಮೂಲಕ 16 ಸುತ್ತುಗಳಲ್ಲಿ 10 ಗಂಟೆಗಳ ನಿರಂತರ ಹಾರಾಟವನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ನಡೆಸಿದೆ. ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ವಿಮಾನಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯಾಚರಣೆ ಮಾಡಲು ಸಾಧ್ಯವಾಗದಿದ್ದರೂ, ಸಂಕಷ್ಟದಲ್ಲಿ ಸಿಲುಕಿರುವವರ ಮಾಹಿತಿಯನ್ನು ಈ ಹಾರಾಟದಿಂದ ಕಂಡು ಕೊಳ್ಳಲು ಸಾಧ್ಯವಾಗಿದೆಯೆಂದು ತಿಳಿಸಿದರು.
ಇಲ್ಲಿಯವರೆಗೆ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಭಾರತೀಯ ಸೇನೆಯ ಎರಡು ಉಪ ತುಕಡಿಗಳನ್ನು ಮುಕ್ಕೋಡ್ಲು ಮತ್ತು ಕಾಲೂರಿನಲ್ಲಿ ನಿಯೋಜಿಸಲಾಗಿದೆ. ಒಂದು ತುಕಡಿ 2 ಹಿರಿಯ ಅಧಿಕಾರಿಗಳು, 4 ಕಿರಿಯ ಅಧಿಕಾರಿಗಳು ಹಾಗೂ 70 ಸೈನಿಕರನ್ನು ಹೊಂದಿದೆ. ರಕ್ಷಣಾ ಕಾರ್ಯ ಕೈಗೊಳ್ಳಲು ತಾಂತ್ರಿಕ ಪರಿಣತಿ ಹೊಂದಿರುವ ಒಂದು ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ತಂಡದಲ್ಲಿ ಒಬ್ಬ ಹಿರಿಯ ಅಧಿಕಾರಿ, 4 ಕಿರಿಯ ಅಧಿಕಾರಿಗಳು, 34 ಇತರೆ ಅಧಿಕಾರಿಗಳು ಹಾಗೂ 4 ದೋಣಿ ರಕ್ಷಣಾ ತಂಡ ಹಾಗೂ 4 ಮೋಟಾರ್ ಬೋಟ್ನೊಂದಿಗೆ ಇತರೆ ರಕ್ಷಣಾ ಸಾಮಗ್ರಿಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸಂತ್ರಸ್ತರಿಗೆ ಸಾಂತ್ವನ
ಈ ಮಧ್ಯೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಮಡಿಕೇರಿಯ ಶ್ರೀಲಕ್ಷಿ¾àನರಸಿಂಹ ಕಲ್ಯಾಣ ಮಂಟಪದಲ್ಲಿ ಸೇವಾಭಾರತಿಯ ಪುನರ್ವಸತಿ ಕೇಂದ್ರ, ಮೈತ್ರಿ ಪೊಲೀಸ್ ಸಭಾಂಗಣಕ್ಕೆ ಆಗಮಿಸಿ, ಸಂತ್ರಸ್ತರಿಗೆ ಅಭಯ ನೀಡಿದರು, ಮಕ್ಕಳೊಂದಿಗೆ ಯೋಗಕ್ಷೇಮ ವಿಚಾರಿಸಿದರು.ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗಿನ ಸಂತ್ರಸ್ತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಪûಾತೀತವಾಗಿ ಸ್ಪಂದಿಸಲಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು