ಗೋಹತ್ಯೆಗೂ, ಕೇರಳ ಪ್ರವಾಹಕ್ಕೇನು ಸಂಬಂಧ?
Team Udayavani, Aug 27, 2018, 6:30 AM IST
ಮೈಸೂರು: ಗೋಹತ್ಯೆಗೂ, ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಬಿಜೆಪಿ ನಾಯಕರ ಇಂತಹ ಹೇಳಿಕೆಗಳಿಗೆಲ್ಲಾ ನಾವು ಪ್ರತಿಕ್ರಿಯೆ ನೀಡಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇರಳದಲ್ಲಿ ಬಹಿರಂಗವಾಗಿ ಗೋವುಗಳನ್ನು ಕಡಿದು, ಗೋಮಾಂಸ ಸೇವಿಸಿದ್ದರಿಂದಲೇ ಪ್ರವಾಹ ಬಂದಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಕಿಡಿಕಾರಿದ ಅವರು, ಕೇರಳದಲ್ಲಿ ಹಿಂದಿನಿಂದಲೂ ಗೋಮಾಂಸ ಸೇವಿಸುತ್ತಾ ಬಂದಿದ್ದಾರೆ. ಆಗೆಲ್ಲಾ ಏಕೆ ಪ್ರವಾಹ ಬಂದಿರಲಿಲ್ಲ ಎಂದು ಪ್ರಶ್ನಿಸಿದರು.