ರಸ್ತೆ ಪುನರ್ ನಿರ್ಮಾಣಕ್ಕೆ 2000 ಕೋಟಿ ರೂ. ಅಗತ್ಯ
Team Udayavani, Aug 28, 2018, 6:50 AM IST
ಹಾಸನ: ಅತಿವೃಷ್ಟಿ, ಪ್ರವಾಹ, ಭೂ ಕುಸಿತದಿಂದ ರಾಜ್ಯದ 7 ಜಿಲ್ಲೆಗಳಲ್ಲಿ ರಸ್ತೆ ಮತ್ತು ಸೇತುವೆಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ಸುಮಾರು 2000 ಕೋಟಿ ರೂ. ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯೊಂದರಲ್ಲಿಯೇ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ 450 ಕೋಟಿ ರೂ. ಅಗತ್ಯವಿದೆ. ಹಾಸನ ಜಿಲ್ಲೆಗೆ 300 ಕೋಟಿ ರೂ. ಅಗತ್ಯದ ಅಂದಾಜು ಮಾಡಲಾಗಿದೆ. ಸುಬ್ರಹ್ಮಣ್ಯ, ಸೋಮವಾರಪೇಟೆ ಸಂಪರ್ಕಿಸುವ ಬಿಸಿಲೆಘಾಟ್ ರಸ್ತೆ ದುರಸ್ತಿಗಾಗಿಯೇ 200 ಕೋಟಿ ರೂ. ಅಗತ್ಯವಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಅತಿವೃಷ್ಟಿಯಿಂದ ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ಸೇತುವೆಗಳಿಗೆ 100 ಕೋಟಿ ಪ್ಯಾಕೇಜ್: ಮಲೆನಾಡು ಪ್ರದೇಶಗಳಲ್ಲಿ ಅಪಾಯಕಾರಿಯಾಗಿರುವ 900 ಸಂಕಗಳಿಗೆ ಪರ್ಯಾಯವಾಗಿ ಸೇತುವೆಗಳ ನಿರ್ಮಾಣಕ್ಕೆ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಮಂಜೂರಾಗಿದೆ ಸಚಿವ ರೇವಣ್ಣ ಅವರು ಹೇಳಿದರು.