ರಾಯರ ಮಧ್ಯಾರಾಧನೆಗೆ ಶೇಷವಸ್ತ್ರ ಸಮರ್ಪಣೆ
Team Udayavani, Aug 29, 2018, 6:00 AM IST
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನಿಮಿತ್ತ ತಿರುಮಲ ತಿಮ್ಮಪ್ಪ ದೇವಸ್ಥಾನದಿಂದ ಬಂದ ಶೇಷವಸ್ತ್ರ ಸಮರ್ಪಣೆ, ಪ್ರಹ್ಲಾದರಾಜರ ಸುವರ್ಣ ರಥೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ಮಂಗಳವಾರ ವಿಜೃಂಭಣೆಯಿಂದ ನೆರವೇರಿದವು.
ಸಪ್ತರಾತ್ರೋತ್ಸದ ಪದ್ಧತಿಯಂತೆ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಶ್ರೀ ಉತ್ಸವ ರಾಯರ ಪಾದಪೂಜೆ ನೆರವೇರಿಸಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿತು. ಗ್ರಂಥಗಳ ಪಾರಾಯಣ, ಪಲ್ಲಕ್ಕಿ ಸೇವೆ, ದೇವ-ಮಂತ್ರಗಳ ಘೋಷಣೆ, ದಾಸವಾಣಿ, ಪ್ರವಚನಗಳು ಜರುಗಿದವು. ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನ ದಿಂದ ತಂದ ಶೇಷವಸ್ತ್ರಗಳನ್ನು ಶ್ರೀಗಳೇ ಸ್ವಾಗತಿಸಿದರು. ನಂತರ ತಲೆ ಮೇಲೆ ಹೊತ್ತು ಮೆರವಣಿಗೆ ಮೂಲಕ ಸಾಗಿ ರಾಯರ ಮೂಲಬೃಂದಾವನ ಮುಂದಿಟ್ಟು ರಾಯರಿಗೆ ಸಮರ್ಪಿಸಿದರು. ಶ್ರೀಮಠದ ಧಾರ್ಮಿಕ ವಿಧಿ ವಿಧಾನ ಗಳಿಂದ ಗುರುರಾಜರಿಗೆ ಪಾದಪೂಜೆ ಮಾಡಲಾಯಿತು. ಬಳಿಕ ಮಠದ ಪ್ರಾಂಗಣದಲ್ಲಿ ಪ್ರಹ್ಲಾದರಾಜರ ವಿಗ್ರಹವನ್ನು ಚಿನ್ನದ ರಥದಲ್ಲಿರಿಸಿ ರಥೋತ್ಸವ ಜರುಗಿಸಲಾಯಿತು. ನಂತರ ಶ್ರೀಗಳು ಮೂಲರಾಮದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, “ತಿರುಪತಿ ಮತ್ತು ಮಂತ್ರಾಲಯ ಕ್ಷೇತ್ರಗಳು ವಿಶ್ವಪ್ರಸಿದ್ಧಿ ಹೊಂದಿವೆ. ಸರ್ವ ಜಾತಿ, ಜನಾಂಗದ
ಭಕ್ತಿ ಕೇಂದ್ರಗಳಾಗಿವೆ. ಎರಡೂ ಕ್ಷೇತ್ರಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ರಾಯರ ಅನುಗ್ರಹವಿದ್ದರೆ ಸಾಕು ಜೀವನದಲ್ಲಿ ಮತ್ತೇನೂ ಬೇಡ. ನಿಷ್ಕಲ್ಮಶ ಮನದಿಂದ ಯಾರು ರಾಯರನ್ನು ಆರಾ ಧಿಸುವರೋ ಅವರಿಗೆ ರಾಯರ ಕೃಪೆ ಸಿಗಲಿದೆ’ ಎಂದರು.
ಇದೇ ವೇಳೆ ಸಾರಿಗೆ ಬಸ್ ನಿಲ್ದಾಣ ಎದುರು ನಿರ್ಮಿಸಿದ 33 ವಾಣಿಜ್ಯ ಮಳಿಗೆ, ವಸತಿ ಕೊಠಡಿಗಳನ್ನು ಆಂಧ್ರದ ಉಪ ಮುಖ್ಯಮಂತ್ರಿ ಕೆ.ಇ. ಕೃಷ್ಣಮೂರ್ತಿ ಉದ್ಘಾಟಿಸಿದರು. 65 ಲಕ್ಷ ರೂ. ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ 30 ಕೊಠಡಿಗಳ ಶ್ರೀಸುಜಯೀಂದ್ರ ವಸತಿಗೃಹವನ್ನೂ ಲೋಕಾರ್ಪಣೆ ಮಾಡಲಾಯಿತು.
ಮೆರಗು ಹೆಚ್ಚಿಸಿದ ವರುಣ
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಗೆ ವರುಣನ ಸಿಂಚನ ಮತ್ತಷ್ಟು ಮೆರಗು ಹೆಚ್ಚಿಸಿತು. ಪ್ರತಿ ಮಧ್ಯಾರಾಧನೆಗೆ ಮಳೆ ಬರುತ್ತದೆಂಬ ಪ್ರತೀತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿಯೂ ಮಳೆರಾಯ ಆರಾಧನೆಗೆ ಸಾಕ್ಷಿಯಾದ. ಆದರೆ, ಭಕ್ತರು ಮಳೆಯನ್ನೂ ಲೆಕ್ಕಿಸದೆ ಉರುಳು ಸೇವೆ, ಪ್ರದಕ್ಷಿಣೆ ಹಾಕುತ್ತಿದ್ದುದು ಕಂಡು ಬಂತು. ಇನ್ನು ನದಿಯಲ್ಲಿಯೂ ಭಕ್ತರು ಮಳೆಯಲ್ಲೇ ಪುಣ್ಯಸ್ನಾನಗೈದು ರಾಯರ ದರ್ಶನಾಶೀರ್ವಾದ ಪಡೆದರು. ಆರಾಧನೆಗೆ ಸುತ್ತಲಿನ ವಿವಿಧ ಗ್ರಾಮಗಳಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದ್ದರು. ರಾಜ್ಯ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಜನಾ ಮಂಡಳಿಗಳು ರಾಯರ ಸೇವೆ ಸಲ್ಲಿಸಿದವು.
ರಾಯರ ಅನುಗ್ರಹವಾದರೆ ಲೋಕಸಭೆಗೆ ಸ್ಪರ್ಧೆ
ರಾಯಚೂರು: “ಗುರು ರಾಘವೇಂದ್ರ ಸ್ವಾಮಿಗಳಲ್ಲಿ ಆರೋಗ್ಯ ನೀಡುವಂತೆ ಬೇಡಿಕೊಂಡಿದ್ದು, ಗುರುಗಳ ಅನುಗ್ರಹವಾದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ನಡೆದ ಮಧ್ಯಾರಾಧನೆಯಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಇಲ್ಲಿಗೆ ದರ್ಶನಕ್ಕಾಗಿ ಬಂದಿದ್ದೇನೆ. ರಾಜಕೀಯ ಮಾತನಾಡಲಿಕ್ಕಲ್ಲ. ರಾಜಕೀಯವಾಗಿ ಸಾಕಷ್ಟು ಅನುಭವಿಸಿದ್ದೇನೆ. ಮುಂದೆ ಲೋಕಸಭೆ ಚುನಾವಣೆ ಎದುರಿಸುವ ಶಕ್ತಿ ಇದೆ. ಆದರೆ, ಚುನಾವಣೆಗೆ ನಿಲ್ಲುವ ಭ್ರಮೆಯಿಲ್ಲ. ಮತ್ತೂಮ್ಮೆ ಚುನಾವಣೆಗೆ ನಿಲ್ಲುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಚುನಾವಣೆಗೆ
ಇನ್ನೂ 10 ತಿಂಗಳು ಬಾಕಿಯಿದೆ. ಗುರುಗಳ ಪ್ರೇರಣೆ, ದೇಹದ ಪ್ರಕೃತಿ ಆಧಾರದ ಮೇಲೆ ನಡೆಯುತ್ತೇನೆ’ ಎಂದರು. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಮಾಡಿದೆ. ಆದರೆ, ಈವರೆಗೂ ಯಾವುದೇ ಆರ್ಥಿಕ ಭರವಸೆ ಸಿಕ್ಕಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!