31ಕ್ಕೆ ಸಮನ್ವಯ ಸಮಿತಿ ಸಭೆ
Team Udayavani, Aug 29, 2018, 6:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎದುರಾಗಿದೆ ಎಂಬ ಚರ್ಚೆಗಳ ಮಧ್ಯೆ ಆ.31 ರಂದು ಸಮನ್ವಯ ಸಮಿತಿ ಸಭೆ ನಿಗದಿಪಡಿಸಲಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಸೆ. 2 ರಿಂದ ವಿದೇಶ ಪ್ರವಾಸ ಕೈಗೊಳ್ಳಲಿರುವುದರಿಂದ ಅದಕ್ಕೂ ಮೊದಲೇ ಸಮನ್ವಯ
ಸಮಿತಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.
ಸಮಿತಿಯ ಸಂಚಾಲಕರಾದ ಡ್ಯಾನಿಶ್ ಅಲಿ ಸಮಿತಿಯ ಎಲ್ಲ ಸದಸ್ಯರಿಗೂ ಸಭೆಯ ಮಾಹಿತಿ ನೀಡಿದ್ದಾರೆ. ಸಾಲ ಮನ್ನಾ ಗೊಂದಲ, ಏಕ ಪಕ್ಷೀಯ ನಿರ್ಧಾರ, ವರ್ಗಾವಣೆ, ಬೇರೆ ಇಲಾಖೆಗಳಲ್ಲಿ ಎಚ್.ಡಿ. ರೇವಣ್ಣ ಹಸ್ತಕ್ಷೇಪ ನಡೆಸುತ್ತಿರು ವುದು ಹಾಗೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಾಗಿ ನೀಡಿದ್ದಾರೆ ಎಂಬ ಹೇಳಿಕೆ ಸರ್ಕಾರದ ಎರಡೂ ಪಕ್ಷಗಳಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ ನಿಗಮ ಮಂಡಳಿ, ಸಂಪುಟ ವಿಸ್ತರಣೆ, ಎರಡೂ ಪಕ್ಷಗಳ ಅಧ್ಯಕ್ಷರನ್ನು ಸಮನ್ವಯ ಸಮಿತಿಗೆ ಸೇರ್ಪಡೆ ಮಾಡುವ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ.