ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮದೇ ವಿಷನ್ ಇದೆ: ಸಿಎಂ
Team Udayavani, Aug 30, 2018, 6:45 AM IST
ರಾಮನಗರ: ಹಿಂದಿನ ಸರ್ಕಾರದ ಯೋಜನೆಗಳ ಜತೆಗೆ ಹೊಸ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮದೇ ಆದ ವಿಷನ್ ಇಟ್ಟುಕೊಂಡಿದ್ದೇವೆ. ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೇದಿಕೆ ಸಿದ್ಧಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕೈಲಾಂಚ ಗ್ರಾಮದಲ್ಲಿ ಮಾತನಾಡಿ, ಸೆಪ್ಟೆಂಬರ್ ತಿಂಗಳಿಂದ ನಮ್ಮದೇ ವಿಷನ್ನ ಕಾರ್ಯಕ್ರಮಗಳು ಜಾರಿಯಾಗಲಿವೆ ಎಂದರು. ಸಮ್ಮಿಶ್ರ ಸರ್ಕಾರಕ್ಕೆ ಆಯಸ್ಸು ಕಡಿಮೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅದೇ ಗುಂಗಿನಲ್ಲಿಯೇ ಇರಲಿ ಎಂದರು.
ಮೇಕೆದಾಟು ಉದ್ಘಾಟನೆ ಆಗುತ್ತೆ: ಮೇಕೆದಾಟು ಯೋಜನೆಗೆ ತಮ್ಮ ಆಡಳಿತಾವಧಿಯಲ್ಲೇ ಚಾಲನೆ ದೊರಕಲಿದೆ. ತಮ್ಮ ಅವಧಿಯಲ್ಲೇ ಈ ಯೋಜನೆ ಉದ್ಘಾಟನೆಯಾಗಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಕೃಷಿ ಮತ್ತು ಗ್ರಾಮೀಣ ಭಾಗಕ್ಕೆ ಕನಿಷ್ಠ 10 ಗಂಟೆ ವಿದ್ಯುತ್ ಸರಬರಾಜಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನನ್ನ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು 100 ದಿನಗಳಾಗಿವೆ. ಈಗಲೂ ಒತ್ತಡದಲ್ಲೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಸ್ಥಳೀಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಹಾಗೊಮ್ಮೆ ಸ್ಪಂದಿಸದಿದ್ದರೆ ಕಾರ್ಯ ನಿರ್ವಹಿಸುವ ದಿನ ಬೆಳಿಗ್ಗೆ 11 ರಿಂದ 12 ಗಂಟೆ ವೇಳೆಗೆ ಕೃಷ್ಣಾ ಕಚೇರಿಗೆ ಬನ್ನಿ. ನಿಮ್ಮೆಲ್ಲರ ಸಮಸ್ಯೆ ಪರಿಹರಿಸಲು ಬದ್ಧ.
– ಎಚ್.ಡಿ.ಕುಮಾರಸ್ವಾಮಿ, ಸಿಎಂ