ಕಾಂಗ್ರೆಸ್ ಕೆಡವಲು ಜೈಲಿಗೆ ಹೋಗಿದ್ದೆ: ಜನಾರ್ದನ ರೆಡ್ಡಿ

ಬೆಳಗಾವಿ: "ಕಾಂಗ್ರೆಸ್ ಸರ್ಕಾರ ಕೆಳಗಿಸುವ ಉದ್ದೇಶದಿಂದಲೇ ನಾನು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆ' ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ವೆಂಕಟರೆಡ್ಡಿ ಫೌಂಡೇಶನ್ ವತಿಯಿಂದ ಭಾನುವಾರ ನಡೆದ ಸಂತ ಪಾಠ ಶಾಲೆ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು. "ಈ ವೇದಿಕೆ ಮೇಲೆ ಇರುವ ಯಾರೊಬ್ಬರೂ ಜೈಲಿಗೆ ಹೋಗಿಲ್ಲ ಅಂತ ಅನಿಸುತ್ತೆ. ಆದರೆ
ನಾನು ಕಾಂಗ್ರೆಸ್ ಪಕ್ಷ ಕೆಡವಲು ಜೈಲಿಗೆ ಹೋಗಿದ್ದೆ. ಮಾಜಿ ಶಾಸಕ ವೆಂಕಟರೆಡ್ಡಿ ಅವರು ಸ್ವಾತಂತ್ರ್ಯ ಹೋರಾಟದ ವೇಳೆ ಎಂಟು ವರ್ಷಗಳ ಕಾಲ ಜೈಲಿನಲ್ಲಿದ್ದರು. ಕಾಂಗ್ರೆಸ್ ಪಕ್ಷವನ್ನು ಬೆಳೆಸಲು ವೆಂಕಟರೆಡ್ಡಿ ಜೈಲಿಗೆ ಹೋಗಿದ್ದರು. ಆದರೆ ನಾನು ಆ ಪಕ್ಷವನ್ನು ಕೆಳಗಿಳಿಸುವ ಉದ್ದೇಶದಿಂದ ಜೈಲಿಗೆ ಹೋಗಿ ಬಂದಿದ್ದೇನೆ. ಇದೆಲ್ಲ ನೋಡಿದರೆ ನನಗೆ ಹಾಗೂ ವೆಂಕಟರೆಡ್ಡಿ ಅವರ ಮಧ್ಯೆ ಋಣಾನುಬಂಧ ಇದೆ' ಎಂದರು.