ಮಹದಾಯಿ ಕುರಿತು ಸರ್ವಪಕ್ಷ ಸಭೆ:ಡಿ.ಕೆ.ಶಿವಕುಮಾರ್
Team Udayavani, Sep 6, 2018, 6:10 AM IST
ನವದೆಹಲಿ: “ಮಹದಾಯಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಪ್ರಶ್ನಿಸಬೇಕೆ ಎಂಬ ಬಗ್ಗೆ ಸರ್ವ ಪಕ್ಷ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುತ್ತದೆ’ ಎಂದು ಕರ್ನಾಟಕ ಸರ್ಕಾರ ಹೇಳಿದೆ.
“ಮಹದಾಯಿ ತೀರ್ಪಿನಿಂದ ನಮಗೆ ಸಂತೃಪ್ತಿಯಾಗಿಲ್ಲ. ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ದಾವೆ ಸಲ್ಲಿಸಬೇಕೆ ಅಥವಾ ನ್ಯಾಯಮಂಡಳಿಯ ಮೊರೆ ಹೋಗಬೇಕೆ ಎಂಬ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುತ್ತದೆ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಆ.14ರಂದು ತೀರ್ಪು ನೀಡಿದ್ದ ಮಹದಾಯಿ ನದಿ ನೀರು ನ್ಯಾಯಮಂಡಳಿಯು ಕರ್ನಾಟಕಕ್ಕೆ 13.4 ಟಿಎಂಸಿ ಹಾಗೂ ಗೋವಾ ಮತ್ತು ಮಹಾರಾಷ್ಟ್ರಕ್ಕೆ ತಲಾ 24 ಟಿಎಂಸಿ ಮತ್ತು 1.33 ಟಿಎಂಸಿ ನೀರು ಹಂಚಿಕೆ ಅಂತಿಮಗೊಳಿಸಿತ್ತು.
ಅನುಮತಿ ಬೇಕಿಲ್ಲ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅನುಮತಿ ಅಗತ್ಯವಿಲ್ಲ. ಆದರೆ ತಮಿಳುನಾಡಿನ ಆಕ್ಷೇಪಣೆಗಳನ್ನು ಆಲಿಸಲು ಮತ್ತು ಅದನ್ನು ಪರಿಹರಿಸಲು ನಾವು ಸಿದ್ಧವಿದ್ದೇವೆ. ಈ ಸಂಬಂಧ ತಮಿಳುನಾಡು ಸಿಎಂ ಜೊತೆಗೆ ರಾಜ್ಯದ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ ಎಂದು ಸಚಿವ ಶಿವಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲ ತಮಿಳುನಾಡು ಜಲ ಸಂಪನ್ಮೂಲ ಸಚಿವರೊಂದಿಗೂ ಮಾತುಕತೆ ನಡೆಸಿದ್ದೇನೆ ಎಂದೂ ಹೇಳಿದ್ದಾರೆ.