ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ
Team Udayavani, Sep 6, 2018, 7:00 AM IST
ಬೆಂಗಳೂರು: ಸನಾತನ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ
ಜತೆಗೂಡಿ ಹಿಂದೂ ಜನಜಾಗೃತಿ ಸಮಿತಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಬನ್ನಪ್ಪ ಪಾರ್ಕ್ನಿಂದ ಫ್ರೀಡಂ ಪಾರ್ಕ್ವರೆಗೆ ನಡೆದ ಮೆರವಣಿಗೆಯಲ್ಲಿ ಶ್ರೀರಾಮಸೇನೆ, ಹಿಂದೂ ಮಹಾಸಭಾ, ಕ್ರಾಂತಿ ಸೇನೆ, ಭಾರತೀಯ ಯುವ ಸೇನೆ, ಬಜರಂಗದಳ ಸೇರಿದಂತೆ ಅನೇಕ ಹಿಂದೂ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೆಲವು ವಿಚಾರವಾದಿಗಳ ಹತ್ಯೆಯನ್ನು ಜೋಡಿಸಿ ಸನಾತನ ಸಂಸ್ಥೆ ಮೇಲೆ ಅಪಪ್ರಚಾರ ಮಾಡುವುದಕ್ಕೆ ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ಗುರುಪ್ರಸಾದ್, ಗೌರಿ ಹತ್ಯೆ ಪ್ರಕರಣದಲ್ಲಿ
ಅಮಾಯಕ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿ, ಹಿಂಸೆ ನೀಡಲಾಗುತ್ತಿದೆ. ಜೊತೆಗೆ, ತಮಗೆ ಬೇಕಾದ ರೀತಿಯಲ್ಲಿ ಹೇಳಿಕೆ ಬರೆಸಿಕೊಂಡು ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ 14 ಮಂದಿ ಹಿಂದೂಪರ ಸಂಘಟನೆಯ ಕಾರ್ಯಕರ್ತರಾಗಿದ್ದಾರೆ.
ಇವರಲ್ಲಿ ಒಬ್ಬರೂ ಸಹ ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರಲ್ಲ. ಆದರೂ ಕೂಡ
ಸಂಘಟನೆಯ ಹೆಸರನ್ನು ಎಳೆದು ತರುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.