ಡಿಕೆಶಿಗೆ ಬಂಧನ ಭೀತಿ


Team Udayavani, Sep 9, 2018, 6:00 AM IST

dk-arrest-ed.jpg

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬೆಳಗಾವಿ ಜಿಲ್ಲಾ ರಾಜಕಾರಣದ ಕಂಟಕ ತಪ್ಪಿತು ಎನ್ನುವಷ್ಟರಲ್ಲೇ ಐಟಿ ದಾಳಿ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನವಾಗಲಿದೆ ಎಂಬ ಮತ್ತೂಂದು ಆತಂಕ ಎದುರಾಗಿದೆ.

ಇದರ ನಡುವೆಯೇ ಡಿ.ಕೆ.ಶಿವಕುಮಾರ್‌ ಸಹೋದರ ಸಂಸದ ಡಿ.ಕೆ.ಸುರೇಶ್‌ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ನಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಡ ಹೇರಿದ್ದರು ಎಂದು ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ.

ಇದರ ಬೆನ್ನಲ್ಲೇ, ರಾಷ್ಟ್ರೀಯ ಕಾರ್ಯಕಾರಣಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ದಿಢೀರ್‌ ನಗರಕ್ಕೆ ವಾಪಸ್ಸಾಗಿ, “ಡಿ.ಕೆ.ಸುರೇಶ್‌ ಬಿಡುಗಡೆ ಮಾಡಿರುವ ಪತ್ರ ಫೇಕ್‌. ಆ ರೀತಿಯ ಪತ್ರ ನಾನು ಬರೆದೇ ಇಲ್ಲ” ಎಂದಿದ್ದಾರೆ.

ಮತ್ತೂಂದೆಡೆ ದೆಹಲಿಯಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, “”ಎರಡು ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎನ್ನುವುದನ್ನು ಕಾದು ನೋಡಿ. ಡಿ.ಕೆ.ಶಿವಕುಮಾರ್‌ ಅರೆಸ್ಟ್‌ ಆಗಬಹುದು, ಸಮ್ಮಿಶ್ರ ಸರ್ಕಾರ ಬೀಳಲೂ ಬಹುದು” ಎಂದು ಬಾಂಬ್‌ ಸಿಡಿಸಿದ್ದಾರೆ.ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, “”ಯಾರ್ಯಾರು ಏನೇನು ಆಟ ಆಡುತ್ತಿದ್ದಾರೆ ಗೊತ್ತಿದೆ. ಈ ಸಮ್ಮಿಶ್ರ ಸರ್ಕಾರ ಹೇಗೆ ಬೀಳಿಸುತ್ತಾರೋ ನಾನು ನೋಡುತ್ತೇನೆ” ಎಂದು ಸವಾಲು ಹಾಕಿದ್ದಾರೆ.

ಹೀಗೆ, ಇಡೀ ದಿನ ಇದೇ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌-ಕಾಂಗ್ರೆಸ್‌ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದವು. ಡಿ.ಕೆ.ಸುರೇಶ್‌ ಅವರು ಬಿಡುಗಡೆ ಮಾಡಿದ ಪತ್ರ ನಕಲಿ ಎಂದು ರಾಜ್ಯ ಬಿಜೆಪಿ ಘಟಕವೂ ಅಧಿಕೃತ ಪ್ರಕಟಣೆ ನೀಡಿದೆ.

ಏನೇನಾಯ್ತು?
ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಸದ ಡಿ.ಕೆ.ಸುರೇಶ್‌, “”ಕಳೆದ ಒಂದು ವರ್ಷದ ಹಿಂದೆ ಆದಾಯ ತೆರಿಗೆ ಇಲಾಖೆಯವರು ನಮ್ಮ ಮನೆ, ಕಚೇರಿ, ಆಪ್ತರ ಕಚೇರಿಗಳ ಮೇಲೆ ದಾಳಿ ಮಾಡಿ ಕೆಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ನಾಲ್ಕು ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್‌ಗೆ ಹಾಕಿದ್ದರು. ಅದರಿಂದ ಪ್ರಯೋಜನವಾಗದಿದ್ದಾಗ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಿ ನಮ್ಮನ್ನು° ಬಂಧಿಸಲು ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪ ಮಾಡಿದರು.

ಸಚಿವ ಶಿವಕುಮಾರ್‌ ಹಾಗೂ ಸಂಸದ ಸುರೇಶ್‌ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ 2017ರ ಜನವರಿ 10 ರಂದು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಒತ್ತಡ ಹೇರಿರುವ ಪತ್ರವನ್ನು ಸಹ ಬಿಡುಗಡೆ ಮಾಡಿದರು.

“”ಬಿಜೆಪಿ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಶಿವಕುಮಾರ್‌ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡೆಸಿಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸಂಸ್ಥೆಗಳು ಬಿಜೆಪಿಯ ಮೋರ್ಚಾಗಳಾಗಿ ಕೆಲಸ ಮಾಡುತ್ತಿದ್ದು, ದೇಶದ ವಿರೋಧ ಪಕ್ಷಗಳಲ್ಲಿ ಪ್ರಭಾವಿ ರಾಜಕಾರಣಿಗಳನ್ನು ಹತ್ತಿಕ್ಕಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿಯವರು ಸೋನಿಯಾ ಗಾಂಧಿ, ವೀರಭದ್ರ ಸಿಂಗ್‌, ಮಮತಾ ಬ್ಯಾನರ್ಜಿ ಸೇರಿ ಅನೇಕ ನಾಯಕರಿಗೆ ತೊಂದರೆ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆಗೆ ಒತ್ತಡ ಹೇರಿ ಬಿಜೆಪಿಗೆ ಸೇರಿಸಿಕೊಂಡರು. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್‌ ಶಾಸಕರಿಗೆ ರಕ್ಷಣೆ ನೀಡಿದ್ದೇವೆ ಎನ್ನುವ ಕಾರಣಕ್ಕೆ ಈಗ ನಮ್ಮನ್ನು ಟಾರ್ಗೆಟ್‌ ಮಾಡಿದ್ದಾರೆ.” ಎಂದರು.

“”ಶಿವಕುಮಾರ್‌ ಅವರನ್ನು ಒಂದು ತಿಂಗಳಲ್ಲಿ ಬಂಧಿಸುತ್ತೇವೆ ಎಂದು ಬಿಜೆಪಿಯವರು ಬಹಿರಂಗವಾಗಿ ಹೇಳಿಕೊಂಡರು. ಆದರೆ, ಅಧಿಕೃತವಾಗಿ ನಮಗೆ ಜಾರಿ ನಿರ್ದೇಶನಾಲಯದಿಂದ ಯಾವುದೇ ನೋಟಿಸ್‌ ಕೂಡ ಬಂದಿಲ್ಲ. ನಾನೂ ಸಿಬಿಐ ವಿಚಾರಣೆಗೆ ಹಾಜರಾಗಿ ಬಂದಿದ್ದೇನೆ. ನಾವು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಸಿಬಿಐ ನಮ್ಮನ್ನು ಬಂಧಿಸಿದರೆ ಎದುರಿಸಲು ನಾವು ಸಿದ್ದರಿದ್ದೇವೆ. ದೇಶನ ಸಂವಿಧಾನದ ಮೇಲೆ ನಮಗೆ ನಂಬಿಕೆ ಇದೆ” ಎಂದು ಹೇಳಿದರು.

ಪ್ರಧಾನಿ ಭೇಟಿಗೆ ಮನವಿ: ಬಿಜೆಪಿ ನಾಯಕರು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಈ ಬಗ್ಗೆ ಪ್ರಧಾನಿ ಗಮನಕ್ಕೆ ತರಲು ಭೇಟಿಗೆ ಮನವಿ ಮಾಡಿದ್ದೇನೆ. ಪ್ರಧಾನಿ ಅವಕಾಶ ನೀಡಿದರೆ, ಬಿಜೆಪಿ ನಾಯಕರು ಅಧಿಕಾರ ಹಿಡಿಯಲು ಪ್ರತಿಪಕ್ಷಗಳ ನಾಯಕರಿಗೆ ಕಿರುಕುಳ ನೀಡುತ್ತಿರುವುದನ್ನು ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.

ಆಪರೇಶನ್‌ ಕಮಲ ಆರೋಪ: ರಾಜ್ಯ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಏಳು ಜನ ಕಾಂಗ್ರೆಸ್‌ ಶಾಸಕರನ್ನು ಆಪರೇಶನ್‌ ಮಾಡಲು ತೀರ್ಮಾನಿದ್ದಾರೆ. ಈ ಬಗ್ಗೆ ಶಾಸಕರ ಜೊತೆ ಮಾತುಕತೆಯಾಗಿರುವ ಕುರಿತು ಮಾಹಿತಿ ಇದೆ. ಸಮ್ಮಿಶ್ರ ಸರ್ಕಾರಕ್ಕೆ ರಕ್ಷಣೆಯಾಗಿ ನಿಂತಿರುವ ಡಿ.ಕೆ.ಶಿವಕುಮಾರ್‌ನ್ನು ಅತಂತ್ರಗೊಳಿಸಿದರೆ, ಸರ್ಕಾರ ಉರುಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಆಪರೇಶನ್‌ ಕಮಲ ಮಾಡುವ ಪ್ರಯತ್ನ ನಡೆಸಿದ್ದಾರೆ. ಶಿವಕುಮಾರ್‌ ಅಷ್ಟೇ ಅಲ್ಲ. ಇನ್ನೂ ಮೂರ್ನಾಲ್ಕು ಕಾಂಗ್ರೆಸ್‌ ನಾಯಕರನ್ನು ಹತ್ತಿಕ್ಕುವ ಪ್ರಯತ್ನ  ನಡೆದಿದೆ ಎಂದು ದೂರಿದರು.

ಬಿಜೆಪಿ ಟ್ವೀಟ್‌:
ಕಾಂಗ್ರೆಸ್‌ನವರು ಫೋಟೋ ಶಾಪ್‌ ಮೂಲಕ ನಕಲಿ ಪತ್ರ ಸೃಷ್ಟಿಸಿದ್ದಾರೆ ಎಂದು ಡಿ.ಕೆ.ಸುರೇಶ್‌ ಅವರ ಆರೋಪಕ್ಕೆ ಬಿಜೆಪಿ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.  ಮೂಲ ಲೆಟರ್‌ಹೆಡ್‌ಗೂ, ಸುರೇಶ್‌ ಬಿಡುಗಡೆ ಮಾಡಿರುವ ಲೆಟರ್‌ಹೆಡ್‌ಗೂ ವ್ಯತ್ಯಾಸವಿದೆ. ಕರ್ನಾಟಕದ ಜನರೇ  ಎಕ್ಸ್‌ಕ್ಲೂಸೀವ್‌ ಸುದ್ದಿಗೆ ಸಿದ್ಧರಾಗಿ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. ಬಿ.ಎಸ್‌.ಯಡಿಯೂರಪ್ಪ ಅವರ ಲೆಟರ್‌ಹೆಡ್‌ನ‌ಲ್ಲಿ ಬೆಂಗಳೂರು ನಿವಾಸದ ವಿಳಾಸವಿದ್ದು , ಫೋನ್‌ ನಂಬರ್‌ ಶಿವಮೊಗ್ಗದ್ದಿದೆ. ಯಡಿಯೂರಪ್ಪ ಅವರ ಸಹಿ ಯಾವಾಗಲೂ ಬಲ ಭಾಗದಲ್ಲಿರುತ್ತದೆ. ಆದರೆ, ನಕಲು ಪತ್ರದಲ್ಲಿ ಸಹಿ ಎಡಭಾಗಕ್ಕೆ ಮಾಡಲಾಗಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ಡಿ.ಕೆ.ಸುರೇಶ್‌ ಬಿಡುಗಡೆ ಮಾಡಿರುವ ಪತ್ರ ಫೇಕ್‌.  ಅವರು ಹಾದಿ ತಪ್ಪಿಸುತ್ತಿದ್ದಾರೆ,  ಶಿವಕುಮಾರ್‌ ವಿರುದ್ಧ ನಾನು ಎಂದೂ ಆರೋಪ ಮಾಡಿಲ್ಲ. ನನ್ನ ಹಾಗೂ ಅವರ ನಡುವೆ ಉತ್ತಮ ಸಂಬಂಧವಿದೆ. ಸುರೇಶ್‌ ಒಮ್ಮೆ ಕೇಳಿ ತಿಳಿದುಕೊಳ್ಳಲಿ, ಆಗ ಗೊತ್ತಾಗುತ್ತದೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ನನ್ನ ವಿರುದ್ಧ ಏಕೆ ಎಫ್ಐಆರ್‌ ಮಾಡುತ್ತಾರೆ? ಬಿಜೆಪಿ ನಾಯಕರು ಅನಗತ್ಯ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಬರೆದಿದ್ದಾರೆನ್ನಲಾದ ಪತ್ರ ನಕಲಿ ಎಂದರೆ ಸಂತೋಷ. ಆ ಪತ್ರದ ಪರಿಣಾಮ ಏನು ಅನ್ನೋದನ್ನು ನಾನು ಅನುಭವಿಸಿದ್ದೇನೆ. ಅಧಿಕಾರ ಯಾರಿಗೂ ಶಾಸ್ವತ ಅಲ್ಲ.
– ಡಿ.ಕೆ. ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ.

ಬಿಜೆಪಿಯವರು ಅನುಕೂಲ ಇದ್ದಾಗ ಕೇಸ್‌ ಹಾಕೋದು, ಅನುಕೂಲ ಇಲ್ಲದಿರುವಾಗ ಪ್ರಕರಣಗಳನ್ನು ತೆಗೆದು ಹಾಕುವುದು ನಡೆಯುತ್ತಿದೆ. ಈ ರೀತಿಯ ಪ್ರಯತ್ನದಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ. ಈ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

ಕೇಂದ್ರ ಸರ್ಕಾರ ಐಟಿ, ಸಿಬಿಐ, ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ. ಡಿ.ಕೆ.ಶಿವಕುಮಾರ್‌ ಅವರು ಸರ್ಕಾರದ ಭಾಗ ಆಗಿರುವುದರಿಂದ ಅವರಿಗೆ ತೊಂದರೆಯಾದರೆ ಜೆಡಿಎಸ್‌ ಅವರ ಬೆನ್ನಿಗೆ ನಿಲ್ಲಲಿದೆ.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ರಾಜ್ಯ ರಾಜಕಾರಣದಲ್ಲಿ ಏನಾದರೂ ಆಗಬಹುದು. ಶಿವಕುಮಾರ್‌ ಅರೆಸ್ಟ್‌ ಆಗಬಹುದು ಅಥವಾ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲೂಬಹುದು. ಕಾಂಗ್ರೆಸ್‌ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೊಗಲಿದೆ. ಇಡಿ, ಐಟಿ, ಸಿಬಿಐ ಮೇಲೆ ಅನುಮಾನ ಪಡುವುದು ಸರಿಯಲ್ಲ.
-ಕೆ.ಎಸ್‌. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.