ದಸರಾ ರಜಾ ದಿನ ಕಡಿತಕ್ಕೆ ಚಿಂತನೆ
Team Udayavani, Sep 10, 2018, 6:05 AM IST
ಬೆಂಗಳೂರು : ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜಾ ಕಡಿತ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಪ್ರಕೃತಿ ವಿಕೋಪದಿಂದ ಉಂಟಾದ ಅವಘಡ ಹಾಗೂ ಹಲವು ಕಾರಣಗಳಿಗಾಗಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಶೈಕ್ಷಣಿಕ ಚುಟುವಟಿಕೆ ನಡೆಯುವ ದಿನಗಳಲ್ಲೂ ರಜಾ ಘೋಷಣೆ ಮಾಡಲಾಗಿತ್ತು. ಅದನ್ನೆಲ್ಲ ಸರಿದೂಗಿಸುವ ಉದ್ದೇಶದಿಂದ ದಸರಾ ರಜಾ ಕಡಿತಗೊಳಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದೆ. ಮಂಗಳೂರು ಜಿಲ್ಲೆಯಲ್ಲಿ ಈ ಸಂಬಂಧ ಈಗಾಗಲೇ ನಿರ್ಧಾರ ತೆಗೆದುಕೊಂಡಾಗಿದೆ. ಕೊಡಗು ಜಿಲ್ಲೆಯಲ್ಲಿ ದಸರಾ ರಜೆ ನೀಡುವುದು ಕಷ್ಟ. ಉಳಿದ ಜಿಲ್ಲೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಹೊರಡಿಸಿರುವ ವಾರ್ಷಿಕ ಮಾರ್ಗಸೂಚಿಯ ಪ್ರಕಾರ ಅ.8ರಿಂದ 21ರವರೆಗೆ ದಸರಾ ರಜೆ ನೀಡಬೇಕು. ಕಳೆದ ವರ್ಷ 22 ದಿನ ರಜೆ ನೀಡಲಾಗಿತ್ತು. ಈ ವರ್ಷ ವಿದ್ಯಾರ್ಥಿಗಳಿಗೆ ದಸರಾ ರಜೆ 14 ದಿನ ನಿಗದಿಯಾಗಿದ್ದರೂ, ಅಷ್ಟು ದಿನ ಸಿಗುವ ಸಾಧ್ಯತೆ ಕಡಿಮೆ ಇದೆ.ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸಂಬಂಧ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ದಸರಾ ರಜೆ ಕಡಿತ ಗೊಳಿಸುವ ಇಲಾಖೆಯ ಚಿಂತನೆಗೆ ಶಾಲಾ ಶಿಕ್ಷಕರ ಸಂಘ ವಿರೋಧ ವ್ಯಕ್ತಪಡಿಸಿದೆ.