ಇಂದು ಸಿಎಂ, ದೇವೇಗೌಡರಿಂದ ಪ್ರಧಾನಿ ಭೇಟಿ
Team Udayavani, Sep 10, 2018, 6:00 AM IST
ಬೆಂಗಳೂರು: ಭಾರೀ ಮಳೆಯಿಂದ ಕೊಡಗು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ ವಿಕೋಪದಿಂದ ಉಂಟಾಗಿರುವ ಹಾನಿಗೆ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ನಿಯೋಗ ಸೋಮವಾರ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ.
ನೆರೆ ಪರಿಹಾರ ಕೋರಿ ಅ. 30ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ನಿಯೋಗ ದೆಹಲಿಗೆ ತೆರಳಿದ್ದಾಗ ಪ್ರಧಾನಿಯವರು ವಿದೇಶ ಪ್ರವಾಸದಲ್ಲಿದ್ದರು. ಹೀಗಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಮಳೆಹಾನಿಯಿಂದ 3435.80 ಕೋಟಿ ರೂ. ನಷ್ಟವಾಗಿದ್ದು, ತಕ್ಷಣದ ಪರಿಹಾರವಾಗಿ 2000 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಪ್ರಧಾನಿ ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಚರ್ಚಿಸಿ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದರೂ ಯಾವುದೇ ನೆರವು ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಪ್ರಧಾನಿಯವರನ್ನು ಖುದ್ದು ಭೇಟಿಯಾಗಲು ಮುಂದಾಗಿದ್ದ ಕುಮಾರಸ್ವಾಮಿ ಸೆ. 10ರಂದು ಸಮಯ ನಿಗದಿಪಡಿಸುವಂತೆ ಪ್ರಧಾನಿ ಕಚೇರಿಯನ್ನು ಕೋರಿದ್ದರು. ಅದರಂತೆ ಸಮಯ ನಿಗದಿಯಾಗಿದ್ದು, ಸೋಮಮವಾರ ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಎಚ್.ಡಿ.ದೇವೇಗೌಡ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಕೃಷಿ ಸಚಿವ ಕೃಷ್ಣ ಬೈರೇಗೌಡ ಮತ್ತಿತರರು ಪ್ರಧಾನಿಯವರನ್ನು ಭೇಟಿಯಾಗಿ ತಕ್ಷಣ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಿದ್ದಾರೆ.