ಭಾರತ್‌ ಬಂದ್‌ಗೆ ಬಹುತೇಕ ಸಂಚಾರ  ಸ್ತಬ್ಧ


Team Udayavani, Sep 11, 2018, 6:00 AM IST

ban11091807medn-new.jpg

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳು ನೀಡಿದ್ದ ಭಾರತ್‌ ಬಂದ್‌ಗೆ ಹಳೇ ಮೈಸೂರು, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸ್ತಬ್ಧಗೊಂಡಿದ್ದು ಬಿಟ್ಟರೆ ಜನಜೀವನ ಎಂದಿನಂತಿತ್ತು. ಬಂದ್‌ ವೇಳೆ ಕಂಡು ಬಂದ ಕೆಲವು ಘಟನೆಗಳು ಇಲ್ಲಿವೆ…

ಸೈಕಲ್‌ ಏರಿದ ಕಾಂಗ್ರೆಸ್‌ ಮುಖಂಡರು!
ಭಾರತ್‌ ಬಂದ್‌ಗೆ ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾಂಗ್ರೆಸ್‌ನ ಹಲವು ನಾಯಕರು ಸೈಕಲ್‌ ಏರಿ ಪ್ರತಿಭಟನೆ ನಡೆಸಿದರೆ, ಜೆಡಿಎಸ್‌ ಕಾರ್ಯಕರ್ತರು, ಪ್ರಧಾನಿ ಮೋದಿ ಹಾಗೂ ಕೇಂದ್ರದ ಸಚಿವರ ಅಣಕು ದೇಹಗಳನ್ನು ಕತ್ತೆ ಮೇಲೆ ಮೆರವಣಿಗೆ ನಡೆಸಿದರು. ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ಮಾಜಿ ಸಚಿವ ಎಚ್‌.ವೈ. ಮೇಟಿ ಸೇರಿ ಮುಂತಾದ ಕಾಂಗ್ರೆಸ್‌ ನಾಯಕರು, ಸೈಕಲ್‌ ಸವಾರಿ ಮಾಡಿ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ನೀತಿ ಖಂಡಿಸಿದರು. ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಜ್ಯೂ.ಉಪೇಂದ್ರ ಆರ್‌.ಡಿ. ಬಾಬು, ಕುದುರೆ ಟಾಂಗಾಕ್ಕೆ ಟಂಟಂ ಕಟ್ಟಿ ಎಳೆಸಿದರು.

ಕಾರು ಎಳೆದು ಚಾಲಕರ ಪ್ರತಿಭಟನೆ
ಭಾರತ್‌ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ಬಳ್ಳಾರಿ ಟ್ಯಾಕ್ಸಿ ಚಾಲಕರ ಸಂಘದ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು. ಗ್ಯಾಸ್‌ನ್ನು ಶವಯಾತ್ರೆ ಮೂಲಕ ಅನಿಲ ಬೆಲೆ ಏರಿಕೆಯಾಗಿದೆ ಎಂಬುದನ್ನು ಸೂಚಿಸಿದ ಚಾಲಕರು, ಕಾರಿಗೆ ಹಗ್ಗಕಟ್ಟಿ ರಸ್ತೆಯಲ್ಲಿ ಎಳೆಯುವ ಮೂಲಕ ಗಮನ ಸೆಳೆದರು.

ಇಂದಿರಾ ಕ್ಯಾಂಟಿನ್‌ಗೆ ತಟ್ಟದ ಬಿಸಿ: ನಗರದ ಬುಡಾ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭಾರತ ಬಂದ್‌ ಬಿಸಿ ತಟ್ಟಲಿಲ್ಲ. ನಗರದ ಎಲ್ಲ ಹೋಟೆಲ್‌ಗ‌ಳು ಬಂದ್‌ ಆಗಿದ್ದರಿಂದ ಬಹುತೇಕ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ನಲ್ಲೇ ಉಪಾಹಾರ ಸೇವಿಸಿದರು.

ರಸ್ತೆಯಲ್ಲೇ ಅಡುಗೆ ಮಾಡಿದರು!
ಕಾಂಗ್ರೆಸ್‌ ಪ್ರಮುಖರು ಶಿರಸಿ ನಗರದ ಅಂಚೆ ವೃತ್ತದಲ್ಲಿ ಕಟ್ಟಿಗೆ ಒಲೆಯಿಂದ ಚಹಾ ಹಾಗೂ ಪಲಾವ್‌ ಸಿದ್ಧಗೊಳಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳದಲ್ಲೇ ಸಿದ್ಧ ಮಾಡಿದ ಚಹಾ ಹಂಚಿದ ಬಳಿಕ ನಗರದ ಬಿಡಕಿಬೈಲ್‌ ಸುತ್ತ ಗ್ಯಾಸ್‌ ಸಿಲೆಂಡರ್‌ ಹಾಗೂ ಬೈರ್‌ನ್ನು ತಳ್ಳು ಗಾಡಿ ಮೂಲಕ ತಳ್ಳಿ ಕೇಂದ್ರದ ವಿರುದ್ಧ,ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಬಂದ್‌ ವೇಳೆ ಭರ್ಜರಿ ಮಳೆ
ಭಾರತ್‌ ಬಂದ್‌ಗೆ ಪೂರಕವಾಗಿ ಕೋಲಾರ ನಗರದಲ್ಲಿ ಭರ್ಜರಿ ಮಳೆಯಾದರೆ, ಬೆಸ್ಕಾಂ ಸುಮಾರು 12 ಗಂಟೆಗಳ ಕಾಲ ನಗರದ ಗಲ್‌ಪೇಟೆ ಭಾಗದಲ್ಲಿ ವಿದ್ಯುತ್‌ ಕಡಿತಗೊಳಿಸಿ ಬಂದ್‌ ಆಚರಿಸಿತು. 2 ತಿಂಗಳಿನಿಂದ ಮಳೆಯಿಲ್ಲದೆ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿತ್ತು. ಮಳೆ ಬಾರದಿದ್ದರೆ ಬಹುತೇಕ ಬಿತ್ತನೆಯಾಗಿದ್ದ ಬೆಳೆ ಸಂಪೂರ್ಣ ಒಣ ಗುವ ಸಾಧ್ಯತೆಗಳಿದ್ದವು. ಆದರೆ, ಸೋಮವಾರ ನಸುಕಿನಿಂದ ಆರಂಭವಾದ ಮಳೆ 10 ಗಂಟೆಯವರೆವೆಗೂ ಬಿರುಸಾಗಿ ಸುರಿದು ನಗರಕ್ಕೆ ತಂಪನ್ನೆರೆಯಿತು.

ಯುವ ಕಾಂಗ್ರೆಸ್‌ನ ಪದಾಧಿಕಾರಿಗಳ ಅಮಾನತು
ಬಂದ್‌ ವೇಳೆ ಹೊಟೇಲ್‌ವೊಂದಕ್ಕೆ ನುಗ್ಗಿ ದಾಂಧಲೆ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್‌ನ ಮೂವರು ಪದಾಧಿಕಾರಿಗಳನ್ನು ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಧ್ಯಕ್ಷ ಶಿವಕುಮಾರ ರಾಯನಗೌಡ್ರ ಪಕ್ಷದಿಂದ ಅಮಾನತು ಮಾಡಿದ್ದಾರೆ.ಯುವ ಕಾಂಗ್ರೆಸ್‌ನ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ ಶೆಲ್ವಡಿ, ಹು.ಧಾ.ಪೂರ್ವ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಇಮ್ರಾನ್‌ ಕಡೂರ, ಉಪಾಧ್ಯಕ್ಷ ನಾಗಾರ್ಜುನ ಕತ್ರಿಮಲ್‌ ಅವರನ್ನು ಅಮಾನತು ಮಾಡಲಾಗಿದ್ದು, ರಾಜ್ಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಇಮ್ರಾನ್‌ ಯಲಿಗಾರ ಹಾಗೂ ಪ್ರಕಾಶ ಬುರುಬುರಿ ಘಟನೆ ಸಂದರ್ಭದಲ್ಲಿ ಇರುವುದು ಕಂಡು ಬಂದಿದ್ದು, ಇವರನ್ನೂ ಅಮಾನತು ಮಾಡುವಂತೆ ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಲಾಗಿದೆ ಎಂದು ಶಿವಕುಮಾರ ರಾಯನಗೌಡ್ರ ತಿಳಿಸಿದ್ದಾರೆ.

ಹರಪನಹಳ್ಳಿಯಲ್ಲಿ ಕಾರಿನ ಮೇಲೆ ಕಲ್ಲು ತೂರಾಟ
ತೈಲ ಬೆಲೆ ಏರಿಕೆ ವಿರೋಧಿಸಿ ಹರಪನಹಳ್ಳಿಯಲ್ಲಿ ಸಿಪಿಐಎಂಎಲ್‌ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ರಸ್ತೆ ತಡೆ ನಡೆಸುತ್ತಿದ್ದ ವೇಳೆ ಪೊಲೀಸರ ಜತೆ ವಾಗ್ವಾದ ನಡೆಯಿತು. ಪ್ರತಿಭಟನೆ ನಡೆಸುತ್ತಿದ್ದ ಓರ್ವ ಕಾರ್ಯಕರ್ತನ ಕಾಲಿನ ಮೇಲೆ ಕಾರು ಹರಿಸಿದ ಪರಿಣಾಮ ಕಿಡಿಗೇಡಿಗಳು ಕಾರಿನ ಗಾಜಿಗೆ ಕಲ್ಲು ತೂರಿದ್ದು, ಕಾರ್‌ನ ಮುಂದಿನ ಗಾಜು ಒಡೆದು ಹೋಗಿದೆ.

ಜೆಡಿಎಸ್‌ ಬಾವುಟ ಕಾಣಲೇ ಇಲ್ಲ
ಕಾಂಗ್ರೆಸ್‌ನಿಂದ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ ಶಿವಮೊಗ್ಗದಲ್ಲಿ ನಡೆದ ಮೆರವಣಿಗೆಯಲ್ಲಿ ಬೆರಳಣಿಕೆ ಸಂಖ್ಯೆಯಷ್ಟು ಕಾರ್ಯಕರ್ತರಿದ್ದರು. ಯುವ ಕಾಂಗ್ರೆಸ್‌ ಕಾರ್ಯಕರ್ತರ ಗೈರು ಎದ್ದು ಕಾಣುತಿತ್ತು. ಜೆಡಿಎಸ್‌ ಬೆಂಬಲ ನೀಡಿತ್ತಾದರೂ ಒಬ್ಬರೂ ಬಹಿರಂಗವಾಗಿ ಕಾಣಸಿಕೊಳ್ಳಲಿಲ್ಲ. ಜೆಡಿಎಸ್‌ ಜಿಲ್ಲಾಧ್ಯಕ್ಷರು ತೀರ್ಥಹಳ್ಳಿಯಲ್ಲಿ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. ಜೆಡಿಎಸ್‌ ಪಂಜಿನ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್‌ ಭಾಗಿಯಾಗಿದ್ದರು. ಆದರೆ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಜೆಡಿಎಸ್‌ ಬಾವುಟ ಕಾಣಲೇ ಇಲ್ಲ.

ಬೆಲೆ ಏರಲೇಬೇಕು ಎಂದು
ಆಮ್‌ ಆದ್ಮಿ ಎಡವಟ್ಟು

ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಮ್‌ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರನೋರ್ವ ತೈಲ ದರ ಇಳಿಯಲೇಬೇಕೆಂದು ಘೋಷಣೆ ಕೂಗುವ ಬದಲು ಪೆಟ್ರೋಲ್‌ ದರ ಏರಲೇಬೇಕು ಎಂದು ಘೋಷಣೆ ಕೂಗಿ ಎಡವಟ್ಟು ಮಾಡಿದ. ಆಮ್‌ ಆದ್ಮಿ ಮುಖಂಡ ಸದಾನಂದ ಬಾಮನೆ “ಪೆಟ್ರೋಲ್‌ ದರ’ ಎಂದಾಗ ಕಾರ್ಯಕರ್ತ “ಏರಲೇಬೇಕು’ ಎಂದು ಘೋಷಣೆ ಕೂಗಿದ. ಇದರಿಂದ ಕುಪಿತಗೊಂಡ ಬಾಮನೆ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಕಾರ್ಯಕರ್ತ ಸಿಟ್ಟಿನಿಂದ ಪ್ರತಿಭಟನೆಯಿಂದ ವಾಪಸ್‌ ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೂರು ಪ್ರಕರಣ ದಾಖಲು
“ಭಾರತ್‌ ಬಂದ್‌’ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ ಹಾಗೂ ಮಣಿಪಾಲದಲ್ಲಿ ಮೂರು ಪ್ರಕರಣಗಳನ್ನು
ದಾಖಲಿಸಲಾಗಿದ್ದು, 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕಮಲ್‌ ಪಂತ್‌ ಹೇಳಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆಯಾ ಜಿಲ್ಲೆಗಳಲ್ಲಿ ಕೆಲ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಸಂಜೆ ಬಿಡುಗಡೆ ಮಾಡಿದ್ದಾರೆ ಎಂದು “ಉದಯವಾಣಿ’ಗೆ ತಿಳಿಸಿದರು.

ಕೆಲವೆಡೆ ಚಿತ್ರ ಪ್ರದರ್ಶನ ರದ್ದು
ರಾಜ್ಯಾದ್ಯಂತ ಸೋಮವಾರ ಕೆಲವೆಡೆ ಚಿತ್ರಮಂದಿರಗಳು ಎರಡು ಪ್ರದರ್ಶನ ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ
ಬೆಂಬಲ ನೀಡಿದವು. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಅಧ್ಯಕ್ಷ ಚಿನ್ನೇಗೌಡ, “ಚಿತ್ರಮಂದಿರ ಮಾಲೀಕರು ಸ್ವಯಂ ಪ್ರೇರಿತರಾಗಿ ಎರಡು ಪ್ರದರ್ಶನಗಳನ್ನು ರದ್ದುಪಡಿಸುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಭಾರೀ ನಷ್ಟ- ಆದಾಯ ಖೋತಾ
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಸೋಮವಾರ ಭಾರತ್‌ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರ
ಮಾತ್ರವಲ್ಲದೇ ವ್ಯಾಪಾರ, ವಹಿವಾಟಿ ಸ್ಥಗಿತದಿಂದ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಪೆಟ್ರೋಲಿಯಂ ಉತ್ಪನ್ನ ಆಧಾರಿತ ವ್ಯವಹಾರದಲ್ಲಿನ ವ್ಯತ್ಯಯದಿಂದ ಸುಮಾರು 2,000 ಕೋಟಿ ರೂ. ನಷ್ಟವಾಗಿದ್ದರೆ, ರಾಜ್ಯ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ 160 ಕೋಟಿ ರೂ. ಕೈತಪ್ಪಿದೆ. ಚಿತ್ರರಂಗ ಕೂಡ ಚಿತ್ರೀಕರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರ ಕಾರಿಗೆ ಕಲ್ಲು: ಪ್ರತಿಭಟನೆ
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಂಚರಿಸುತ್ತಿದ್ದ ಕಾರಿಗೆ ಪಾಣೆಮಂಗಳೂರು
ನರಹರಿಪರ್ವತ ಏರಿನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದುಷ್ಕರ್ಮಿಗಳು ದೊಡ್ಡ ಗಾತ್ರದ ಕಲ್ಲೊಂದನ್ನು
ಎಸೆದು ಹಾನಿ ಉಂಟು ಮಾಡಿದ್ದಾರೆ. ಶಾಸಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಹಲವಾರು ವಾಹನಗಳು
ಒಟ್ಟಾಗಿ ಚಲಿಸುತ್ತಿದ್ದಾಗ ಶಾಸಕರ ವಾಹನವನ್ನೇ ಗುರಿಯಾಗಿಸಿ ಕಲ್ಲೆಸೆಯಲಾಗಿದೆ. ಇದು ಪೂರ್ವಯೋಜಿತ ಕೃತ್ಯವೆಂದು ಶಾಸಕರು ಪ್ರತ್ಯೇಕ ದೂರು ನೀಡಿದ್ದಾರೆ.

ಗುಲಾಬಿ ಹೂ ನೀಡಿ ಬಿಜೆಪಿ ಜಾಗೃತಿ
ಕಾಂಗ್ರೆಸ್‌ ರಾಜಕೀಯ ಪ್ರೇರಿತವಾಗಿ ಭಾರತ್‌ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೆ ಸಾರ್ವಜನಿಕರು ಸಹಕಾರ ನೀಡದೇ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಚಾಮರಾಜನಗರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ದೊಡ್ಡಂಗಡಿ, ಚಿಕ್ಕಂಗಡಿ ಬೀದಿಯಲ್ಲಿ ಸಂಚರಿಸಿ, ಗುಲಾಬಿ ಹೂವು ನೀಡಿ ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ ನೇತೃತ್ವದಲ್ಲಿ,ಅಲ್ಲಲ್ಲಿ ತೆರೆದಿದ್ದ ಕೆಲವು ಅಂಗಡಿಗಳು, ರಸ್ತೆ ಬದಿ ತರಕಾರಿ ವ್ಯಾಪಾರಸ್ಥರು ಮತ್ತು ಆಟೋ ಚಾಲಕರನ್ನು ಭೇಟಿ ಮಾಡಿದ ಕಾರ್ಯಕರ್ತರು ಗುಲಾಬಿ ಹೂ ನೀಡಿದರು.

ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ
ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಭಾರತ್‌ ಬಂದ್‌ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೋಮವಾರ ಬೆಳಗ್ಗೆಯಿಂದ ಬಸ್‌ ಹಾಗೂ ಮ್ಯಾಕ್ಸಿಕ್ಯಾಬ್‌ ಬಿಟ್ಟರೆ ಇನ್ನುಳಿದಂತೆ ಯಾವುದೇ ಬಂದ್‌ ಕಂಡು ಬರಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಖಾಸಗಿ ಮ್ಯಾಕ್ಸಿ ಕ್ಯಾಬ್‌ಗಳು ಸಂಚರಿಸಲಿಲ್ಲ. ಅಟೋಗಳ ಸಂಖ್ಯೆ ದಿನನಿತ್ಯಕ್ಕಿಂತಲೂ ಕಡಿಮೆಯಿತ್ತು. ಬೆಳಗ್ಗೆಯಿಂದಲೇ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿದ್ದವು. ಮಹಾರಾಷ್ಟ್ರ, ಗೋವಾ ಸೇರಿ ಇತರೆ ಜಿಲ್ಲೆಗಳಿಂದ ಬಂದ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡಿದರು. ನಗರದ ರೈಲು ನಿಲ್ದಾಣ, ಮುಖ್ಯ ಅಂಚೆ ಕಚೇರಿಯಲ್ಲಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು.

ತರಬೇತಿ ಪಡೆಯುತ್ತಿದ್ದವರು ಪ್ರತಿಭಟನೆಗೆ
ಬೆಳಗಾವಿ ನಗರದಲ್ಲಿ ಕಾಂಗ್ರೆಸ್‌ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಿಲಿಟರಿ ತರಬೇತಿ ಪಡೆಯುತ್ತಿದ್ದ ಯುವಕರನ್ನು ಕರೆ ತರಲಾಗಿತ್ತು. ಸುಮಾರು 60ಕ್ಕೂ ಹೆಚ್ಚು ಯುವಕರು ಗಣೇಶಪುರದಿಂದ ಬಂದಿದ್ದರು. ಚನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಎರಡು ಮ್ಯಾಕ್ಸಿಕ್ಯಾಬ್‌ ಟೆಂಪೋಗಳಲ್ಲಿ ಯುವಕರನ್ನು ಅವರಿರುವ ಸ್ಥಳದಲ್ಲಿ ಬಿಟ್ಟು ಬರಲಾಯಿತು.

ಬೀದರ್‌ನಲ್ಲೂ ಮಿಶ್ರ ಪ್ರತಿಕ್ರಿಯೆ
ಬೀದರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ಬಸ್‌ ಸಂಚಾರ ಇತ್ತು. ಆದರೆ ಯುವ ಕಾಂಗ್ರೆಸ್‌ ಹಾಗೂ ಇತರೆ ಸಂಘಟನೆಗಳು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸುವ ನಿಟ್ಟಿನಲ್ಲಿ ವಿವಿಧೆಡೆ ಬೈಕ್‌ ರ್ಯಾಲಿ ನಡೆಸಿದವು. ಕೆಲವು ಕಡೆಗಳಲ್ಲಿ ಅಂಗಡಿಗಳನ್ನು ಬಂದ್‌ ಮಾಡಿಸುವುದಕ್ಕಾಗಿ ವ್ಯಾಪಾರಸ್ಥರೊಂದಿಗೆ ವಾಗ್ವಾದ ಕೂಡ ನಡೆಯಿತು. ಅಲ್ಲದೆ, ಕಾಂಗ್ರೆಸ್‌ ಹಾಗೂ ಸಿಪಿಐ, ಸಿಪಿಎಂ ಕಾರ್ಯಕರ್ತರು ನಗರದ ಕೇಂದ್ರ ಬಸ್‌ ನಿಲ್ದಾಣಕ್ಕೆ ತೆರಳಿ ಬಸ್‌ ಸಂಚಾರ ಬಂದ್‌ ಮಾಡಿಸುವ ಪ್ರಯತ್ನ ನಡೆಸಿದರು. ಈ ವೇಳೆ ಕಾರ್ಯಕರ್ತರ ಹಾಗೂ ಪೊಲೀಸ್‌ ಅ ಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಕಾರಿನ  ಮೇಲೆ ಕಲ್ಲು ತೂರಾಟ
ತೈಲ ಬೆಲೆ ಏರಿಕೆ ವಿರೋಧಿಸಿ ಹರಪನಹಳ್ಳಿಯಲ್ಲಿ ಸಿಪಿಐಎಂಎಲ್‌ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ರಸ್ತೆ ತಡೆ ನಡೆಸುತ್ತಿದ್ದ ವೇಳೆ ಪೊಲೀಸರ ಜತೆ ವಾಗ್ವಾದ ನಡೆಯಿತು. ಪ್ರತಿಭಟನೆ ನಡೆಸುತ್ತಿದ್ದ ಓರ್ವ ಕಾರ್ಯಕರ್ತನ ಕಾಲಿನ ಮೇಲೆ ಕಾರು ಹರಿಸಿದ ಪರಿಣಾಮ ಕಿಡಿಗೇಡಿಗಳು ಕಾರಿನ ಗಾಜಿಗೆ ಕಲ್ಲು ತೂರಿದ್ದು, ಕಾರ್‌ನ ಮುಂದಿನ ಗಾಜು ಒಡೆದು ಹೋಗಿದೆ.

ರಸ್ತೆ ಮೇಲೆ ಚಹಾ ಮಾಡಿದರು!
ಬಂದ್‌ಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಹೊಟೇಲ್‌, ವ್ಯಾಪಾರ ಮಳಿಗೆಗಳು, ಪೆಟ್ರೋಲ್‌ ಬಂಕ್‌, ಚಿತ್ರಮಂದಿರಗಳು ಬಹುತೇಕ ಬಂದ್‌ ಆಗಿದ್ದವು. ಕಾಂಗ್ರೆಸ್‌ ಮುಖಂಡರು ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ರಸ್ತೆ ನಡುವೆ ಕಟ್ಟಿಗೆ ಒಲೆ ಹೂಡಿ ಚಹಾ ಮಾಡಿ ಪ್ರತಿಭಟಿಸಿದರು. ಎಡಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳ ವತಿಯಿಂದ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯಲಾಯಿತು.

ಅಂಗಡಿ ತೆರೆದವರಿಗೆ ಬಿಜೆಪಿಯವರಿಂದ ಹೂವು: ಭೈರಿದೇವರಕೊಪ್ಪದಲ್ಲಿ ಅಂಗಡಿ ತೆರೆದು ವ್ಯಾಪಾರ-ವಹಿವಾಟು ನಡೆಸುತ್ತಿದ್ದವರಿಗೆ ಬಿಜೆಪಿ ವತಿಯಿಂದ ಗುಲಾಬಿ ಹೂವು ನೀಡಲಾಯಿತು.

ಮೋದಿಗೆ ಜೈಕಾರ.. ಧಿಕ್ಕಾರ ಸಮರ
ಹುಬ್ಬಳ್ಳಿಯ ಸ್ಟೇಶನ್‌ ರಸ್ತೆಯ ಲಕ್ಷ್ಮೀ ಬಾಲಕೃಷ್ಣ ಸ್ಕ್ವೇರ್‌(ಎಲ್‌ಬಿಎಸ್‌)ನಲ್ಲಿ ಕೆಲ ಅಂಗಡಿಗಳು ತೆರೆದಿದ್ದವು. ಕಾಂಗ್ರೆಸ್‌ ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚಿಸಲು ಮುಂದಾದರು. ವ್ಯಾಪಾರಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಮೋದಿಗೆ ಧಿಕ್ಕಾರ ಎಂದು ಕೂಗ ತೊಡಗಿದಾಗ, ಅಂಗಡಿಕಾರರು ಮೋದಿ ಕೀ ಜೈ ಎಂಬ ಘೋಷಣೆ ಕೂಗ ತೊಡಗಿದರು. ಪೊಲೀಸರು ಮಧ್ಯ ಪ್ರವೇಶಿಸಿ, ಎರಡೂ ಕಡೆಯವರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.