ಇಂದು ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಸಭೆ
Team Udayavani, Sep 12, 2018, 6:00 AM IST
ಮಂಡ್ಯ: ರೈತರ ಸಾಲ ವಸೂಲಾತಿ ವಿಚಾರದಲ್ಲಿ ಬ್ಯಾಂಕ್ಗಳು ನೋಟಿಸ್ ನೀಡುತ್ತಿರುವ ಸಂಬಂಧ ಬುಧವಾರ ಆರ್ಥಿಕ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, “ಸಾಲಮನ್ನಾ ವಿಚಾರದಲ್ಲಿ ನಾನು ಈಗಾಗಲೇ ದೃಢ ನಿರ್ಧಾರ ಕೈಗೊಂಡಿದ್ದೇನೆ. ಸಾಲ ವಸೂಲಾತಿಗೆ ರೈತರಿಗೆ ನೋಟಿಸ್ ನೀಡುತ್ತಿರುವ ಸಂಗತಿಯೂ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ರೈತರ ಹಿತ ಕಾಪಾಡುತ್ತೇನೆ. ರೈತರಿಗೆ ಬ್ಯಾಂಕ್ನಿಂದ ನೋಟಿಸ್ ಬಂದರೆ ಗಾಬರಿಯಾಗಬೇಕಿಲ್ಲ. ಬುಧವಾರ ನಡೆಯಲಿರುವ ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಬ್ಯಾಂಕ್ಗಳು ರೈತರಿಗೆ ನೋಟಿಸ್ ಕೊಡುವುದನ್ನು ನಿಲ್ಲಿಸಲು ಸೂಚನೆ ಕೊಡಲು ನಿರ್ಧರಿಸಿದ್ದೇನೆ’ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಮನವಿಗೆ ಸ್ಪಂದಿಸಿದ್ದು, ಕೇಂದ್ರ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಆಗಿರುವ ಹಾನಿ ಸಂಬಂಧ 2,000 ಕೋಟಿ ರೂ.ಪರಿಹಾರ ನೀಡುವಂತೆ ಕೇಳಿದ್ದೇವೆ. ಪರಿಹಾರ ಕೊಡುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಆದರೆ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ತೈಲ ಬೆಲೆ ಇಳಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸಾಧಕ, ಬಾಧಕಗಳನ್ನು ಲೆಕ್ಕಚಾರ ಮಾಡಿ, ತೀರ್ಮಾನ ಮಾಡಬೇಕಾಗುತ್ತದೆ. ಏಕಾಏಕಿ ನಿರ್ಧರಿಸಲು ಸಾಧ್ಯವಿಲ್ಲ. ಚಿಂತನೆ ಮಾಡಿ ಒಂದು ತೀರ್ಮಾನ ಮಾಡುತ್ತೇವೆ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.