ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾಳಜಿ
Team Udayavani, Sep 15, 2018, 6:10 AM IST
ಬೆಂಗಳೂರು: ಸರ್ಕಾರಿ ಶಾಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಉನ್ನತೀಕರಿಸುವ ವಿಷಯವಾಗಿ ವಿದ್ಯಾರ್ಥಿಗಳ ಹಿನ್ನಡೆ ಗುರುತಿಸಿ ಕಾರ್ಯಕ್ರಮ ರೂಪಿಸಲು ಜಿಲ್ಲಾ ಉಪನಿರ್ದೇಶಕರು ಸಜ್ಜಾಗಿದ್ದಾರೆ.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉನ್ನತೀಕರಿಸಲು ವಿಭಿನ್ನ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕೊಡಿ ಮೊದಲಾದವುಗಳು ಅದೇ ಸ್ಥಾನ ಕಾಯ್ದುಕೊಳ್ಳಲು ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆಗಾಗಿ ವಿಶೇಷ ಪ್ರಯತ್ನವನ್ನು ಈಗಾಗಲೇ ಆರಂಭಿಸಿವೆ.
ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವ ಯಾದಗಿರಿ, ಬೀದರ್, ಗದಗ, ರಾಯಚೂರು, ಮಂಡ್ಯ, ಬೆಂಗಳೂರು ದಕ್ಷಿಣ ಮೊದಲಾದ ಜಿಲ್ಲೆಗಳು 2019ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗಾಗಿ ಹೊಸ ಪ್ರಯತ್ನ ನಡೆಸುತ್ತಿವೆ.
2017ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳು ಶೇ.68.87ರಷ್ಟು ಹಾಗೂ ಖಾಸಗಿ ಶಾಲೆಗಳು ಶೇ.80.70ರಷ್ಟು ಫಲಿತಾಂಶ ಪಡೆದಿವೆ. 2018ರಲ್ಲಿ ಸರ್ಕಾರಿ ಶಾಲೆಯ ಫಲಿತಾಂಶ ಶೇ.75.12ಕ್ಕೆ ಏರಿಕೆಯಾಗಿದ್ದರೂ, ಖಾಸಗಿ ಶಾಲೆಗಳ ಫಲಿತಾಂಶ ಶೇ.83.05ರಷ್ಟು ತಲುಪಿದೆ.
ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳ ಫಲಿತಾಂಶ ಏರಿಕೆಯಾಗುತ್ತಿದ್ದರೂ, ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ 2019ರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಯಾರು ಎಲ್ಲ ವಿಷಯದಲ್ಲೂ ಹಿಂದಿದ್ದಾರೆ ಮತ್ತು ವಿಷಯವಾರು ಯಾವ ವಿದ್ಯಾರ್ಥಿಗಳು ನಿರೀಕ್ಷಿತ ಗುರಿ ತಲುಪಿಲ್ಲ ಎಂಬುದರ ಪಟ್ಟಿಯನ್ನು ಶಾಲಾ ಮುಖ್ಯ ಶಿಕ್ಷಕರ ಮೂಲಕ ಡಿಡಿಪಿಐ ಮತ್ತು ಬಿಇಒಗಳು ಸಿದ್ಧಪಡಿಸಿದ್ದಾರೆ. ಇದರ ಆಧಾರದಲ್ಲಿ ವಿಷಯವಾರು ವಿಶೇಷ ಬೋಧನೆ ಮತ್ತು ಪ್ರಗತಿ ಪರಿಶೀಲನೆ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವೈಯಕ್ತಿಕ ನೆಲೆಯಲ್ಲಿ ಯಾವ ರೀತಿಯ ಬೋಧನೆ ಮಾಡಬಹುದು ಎಂಬುದನ್ನು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಪಾಠ ಪ್ರವಚನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ಹೀಗೆ, ವಿಷಯವಾರು ಪ್ರತ್ಯೇಕ ಗುಂಪು ರಚಿಸಲಾಗುತ್ತಿದೆ. ಆಯಾ ಗುಂಪಿಗೆ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಂಡು ವಿಶೇಷ ಬೋಧನೆ ಮಾಡುವ ವ್ಯವಸ್ಥೆಯೂ ಆಗುತ್ತಿದೆ. ಇಷ್ಟಾಗಿಯೂ ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ನೆಲೆಯಲ್ಲಿ ಬೋಧನೆಗೂ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಶೇಷ ತರಗತಿ:
ಶಾಲಾ ತರಗತಿ ಆರಂಭವಾಗುವ ಪೂರ್ವದಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಅಥವಾ ವಾರದಲ್ಲಿ ಒಂದೆರಡು ದಿನ ಬೆಳಗ್ಗೆ ಒಂದು ಗಂಟೆ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತದೆ. ಕೆಲವೊಂದು ಜಿಲ್ಲೆಗಳಲ್ಲಿ ಸಂಜೆ ಒಂದು ಗಂಟೆ ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಭಾನುವಾರ ಬೆಳಗ್ಗೆ ಮತ್ತು ಶನಿವಾರ ಮಧ್ಯಾಹ್ನ ಕೂಡ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ದಸರಾ ರಜೆಯಲ್ಲೂ ವಿಶೇಷ ತರಗತಿ ನಡೆಸಲು ಅವಕಾಶ ಕೋರಿ ಕೆಲವೊಂದು ಜಿಲ್ಲೆಗಳಿಂದ ಆಯುಕ್ತರ ಕಚೇರಿಗೆ ಪತ್ರ ಕೂಡ ಬಂದಿದೆ.
ಸರ್ಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಉನ್ನತೀಕರಿಸಲು ಜಿಲ್ಲಾವಾರು ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವಿದ್ಯಾರ್ಥಿಯ ಪ್ರಗತಿ ಪರಿಶೀಲನೆ ಹಾಗೂ ಪರ್ಯಾಯ ಬೋಧನೆಯೂ ನಡೆಯುತ್ತಿದೆ. ನಮ್ಮ ಮುಂದಿರುವ ಗುರಿ, ಅದಕ್ಕಿರುವ ಸವಾಲು ಮತ್ತು ಪರಿಹಾರ ಅರಿತರೆ ಪ್ರಗತಿ ಸಾಧಿಸಲು ಸಾಧ್ಯ.
– ಡಾ.ಪಿ.ಸಿ.ಜಾಫರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ