ಬಿಜೆಪಿ ವಿರುದ್ಧ ಗೌರ್ನರ್ಗೆ ದೂರು ನೀಡಲು ನಿರ್ಧಾರ
Team Udayavani, Sep 16, 2018, 7:00 AM IST
ಬೆಂಗಳೂರು: ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ಜತೆ ಸೇರಿ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಕಿಂಗ್ಪಿನ್
ಗಳ ವಿವರವನ್ನು ಸದ್ಯದಲ್ಲೇ ಬಯಲು ಮಾಡುವುದಾಗಿ ಹೇಳಿರುವ ಜೆಡಿಎಸ್, ತನ್ನ ಶಾಸಕರಿಗೆ 50 ಕೋಟಿ ರೂ.,
100 ಕೋಟಿ ರೂ.ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ರಾಜ್ಯಪಾಲರು, ಕೇಂದ್ರ ಚುನಾವಣಾ ಆಯೋಗ ಮತ್ತು
ಆದಾಯ ತೆರಿಗೆ ಇಲಾಖೆಗೆ ದೂರು ನೀಡಲು ನಿರ್ಧರಿಸಿದೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮೈತ್ರಿ ಸರ್ಕಾರ ನೀಡುತ್ತಿರುವ ಉತ್ತಮ ಆಡಳಿತ ಸಹಿಸದೆ ಬಿಜೆಪಿ ಅಕ್ರಮ ದಂಧೆಗಳಲ್ಲಿ ತೊಡಗಿರುವ ಕಿಂಗ್ಪಿನ್ಗಳನ್ನು ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಈ ಕಿಂಗ್ಪಿನ್ಗಳು ಯಾರು? ಅವರನ್ನು ರಕ್ಷಿಸುತ್ತಿರುವ ಸೇಫ್ಟ್ಪಿನ್ಗಳು ಯಾರು? ಎಂಬುದನ್ನು ಮುಂದಿನ ದಿನಗಳಲ್ಲಿ ಬಯಲು ಮಾಡಲಾಗುವುದು. ಅಲ್ಲದೆ, ರಾಜ್ಯಪಾಲರಿಗೆ ಈ ಬಗ್ಗೆ ದೂರು ನೀಡಲಾಗುವುದು ಎಂದು ಹೇಳಿದರು.