ಮೈತ್ರಿ ಸರ್ಕಾರ ಬೀಳಿಸಿದರೂ BSY ಸಿಎಂ ಆಗಲ್ವಂತೆ; ರೇವಣ್ಣ ಬಾಂಬ್!
Team Udayavani, Sep 17, 2018, 3:54 PM IST
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತ್ತದೆ, ಅತೃಪ್ತ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೆ, ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟನೆ ನೀಡುತ್ತಲೇ ಮತ್ತೊಂದೆಡೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಲಾಗುತ್ತಿದೆ.
ಏತನ್ಮಧ್ಯೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾದರೂ ಕೂಡಾ ಬಿಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲ್ಲ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ತರುತ್ತಾರೆ ಎಂದು ಬಿಜೆಪಿಯ ಟಾಪ್ ಲೆವೆಲ್ ಮುಖಂಡರೇ ತನಗೆ ಹೇಳಿರುವುದಾಗಿ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ!
ರೇವಣ್ಣ ಅಸಹಾಯಕರಾಗಿ ಏನೇನೋ ಹೇಳಿಕೆ ಕೊಡುತ್ತಿದ್ದಾರೆ: ಬಿಎಸ್ ವೈ
ಸಚಿವ ರೇವಣ್ಣ ಅವರು ಅಸಹಾಯಕರಾಗಿ ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಆಡಳಿತ ನಡೆಸುವುದನ್ನು ಬಿಟ್ಟು ದೇವಸ್ಥಾನಗಳಿಗೆ ಸುತ್ತಾಡುವ ಮೂಲಕ ರಾಜ್ಯದಲ್ಲಿ ಅಭಿವೃದ್ದಿ ಕೆಲಸವನ್ನು ಮರೆತು ಬಿಟ್ಟಿದ್ದಾರೆ. ಇನ್ನಾದರೂ ಬೇಕಾಬಿಟ್ಟಿ ಹೇಳಿಕೆ ಕೊಡೋದನ್ನು ಬಿಟ್ಟು ಒಳ್ಳೇ ರೀತಿಯಲ್ಲಿ ಆಡಳಿತ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿರುಗೇಟು ನೀಡಿದ್ದಾರೆ.