ಇನ್ನು ತಿಂಗಳಿಗೊಮ್ಮೆ ಸಿಎಂ ಜನತಾ ದರ್ಶನ
Team Udayavani, Sep 20, 2018, 6:00 AM IST
ಬೆಂಗಳೂರು: ವೈದ್ಯರ ಸಲಹೆ ಮೇರೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನುಮುಂದೆ ತಿಂಗಳಿಗೊಮ್ಮೆ ಮಾತ್ರ ಜನತಾ ದರ್ಶನ ನಡೆಸಲಿದ್ದಾರೆ.
ಸರ್ಕಾರಿ ರಜಾ ದಿನ ಹೊರತುಪಡಿಸಿ ಪ್ರತಿ ಶನಿವಾರ ಜನತಾ ದರ್ಶನ ನಡೆಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು, ಸೆಪ್ಟೆಂಬರ್ 1ರಿಂದ ಅಧಿಕೃತ ಚಾಲನೆ ನೀಡಿದ್ದರು. ಆದರೆ, ತಿಂಗಳಿಗೊಮ್ಮೆ ಮಾತ್ರ ಜನತಾ ದರ್ಶ ನಡೆಸುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಹೀಗಾಗಿ ಪ್ರತಿ ಶನಿವಾರ ಜನತಾ ದರ್ಶನ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ತಿಂಗಳಿಗೊಮ್ಮೆ ನಡೆಸುವ ಜನತಾ ದರ್ಶನ ಒಂದು ತಿಂಗಳು ಬೆಂಗಳೂರಿನಲ್ಲಿದ್ದರೆ, ಇನ್ನೊಂದು ತಿಂಗಳು ಮುಖ್ಯಮಂತ್ರಿಗಳು ಭೇಟಿ ನೀಡುವ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. ಇವುಗಳ ದಿನಾಂಕ ಹಾಗೂ ಸ್ಥಳವನ್ನು ಮುಂಚಿತವಾಗಿ ತಿಳಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.