ಶಾಸಕರಿಗೆ ಆಫರ್: ಎಚ್ಡಿಕೆ ಬಳಿ ದಾಖಲೆ ಇದೆಯಾ?
Team Udayavani, Sep 22, 2018, 6:00 AM IST
ಬೆಂಗಳೂರು: ಶಾಸಕರಿಗೆ ಬಿಜೆಪಿ ಆಫರ್ ಕೊಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ದಾಖಲೆಗಳು
ಇವೆಯಾ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ದಾಖಲೆ ಇಲ್ಲದೆ ಆರೋಪ ಮಾಡುತ್ತಿರುವುದು ನಿಮಗೆ
ಶೋಭೆ ತರುತ್ತಾ? ಭಾರತದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಬಿಜೆಪಿ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ನಾವೇನು ಅವರ ಕೈ ಹಿಡಿದುಕೊಂಡಿದ್ದೇವಾ? ಅವರ ಶಾಸಕರನ್ನು ಹಿಡಿತದಲ್ಲಿಟ್ಟುಕೊಂಡು ಅಭಿವೃದಿಟಛಿ ಕೆಲಸ ಮಾಡಲಿ, ಯಾರು ಬೇಡ ಎಂದಿದ್ದಾರೆ ಎಂದರು. ದಂಗೆ ಪದ ಭಾವನಾತ್ಮಕವಾಗಿ ಹೇಳಿರುವುದಾಗಿ ತಿಳಿಸಿದ್ದಾರೆ. ಆ ಬಗ್ಗೆ ರಾಜ್ಯದ ಜನತೆಯ ಅಭಿಪ್ರಾಯ ಪಡೆಯಲಿ. ಶೆ.95 ರಷ್ಟು ಜನ ಛೀಮಾರಿ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಜನರ ಅಭಿಪ್ರಾಯಗಳಿಗೆ ಬೆಲೆ ಕೊಡಲಿ ಎಂದು ಹೇಳಿದರು.
ತಿರುಗಿಬಿದ್ದ ಲೆಹರ್ಸಿಂಗ್
ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ವಿಧಾನಪರಿಷತ್ ಸದಸ್ಯ ಲೆಹರ್ಸಿಂಗ್ ಇದೀಗ ಅವರ
ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಕೈಲಿದೆ ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸಣ್ಣ ಉದ್ದೇಶಗಳಿಗೆ ಮೋದಿ ಹೆಸರು ಎಳೆದು ತರಬೇಡಿ. ಕೇಂದ್ರದಲ್ಲಿ ಮೋದಿ ಸರ್ಕಾರ ಮುಯ್ಯಿ ತೀರಿಸಲಿದೆ ಎನ್ನುವಂತೆ ಬಿಂಬಿಸುವುದು ಸರಿಯಲ್ಲ. ಪ್ರಧಾನ ಮಂತ್ರಿಗಳಿಗೆ ತನಿಖಾ ಸಂಸ್ಥೆಗಳನ್ನು ಎಳೆದು ತರಲು ಪಕ್ಷ ಯಾರಿಗೂ ಅಧಿಕಾರ ನೀಡಿಲ್ಲ ಎಂದು ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ರಾಹುಲ್ಗಾಂಧಿ ಕಳ್ಳ ಎಂದು ಕರೆದಿರುವುದು ಕಾಂಗ್ರೆಸ್ಗೆ ಶೋಭೆ ತರುವುದಿಲ್ಲ. ರಾಹುಲ್ಗಾಂಧಿ ಕೂಡಲೇ ದೇಶದ ಕ್ಷಮೆಯಾಚಿಸಬೇಕು. ಈ ಹಿಂದಿನ ಯಾವ ಅಧ್ಯಕ್ಷರೂ ಈ ರೀತಿ ನಡೆದುಕೊಂಡಿರಲಿಲ್ಲ. ರಾಹುಲ್ಗಾಂಧಿ ಬಚ್ಚಾ ರೀತಿ ವರ್ತನೆ ತೋರಿದ್ದಾರೆ.
– ಶೋಭಾ ಕರಂದ್ಲಾಜೆ, ಸಂಸದೆ
ರಾಹುಲ್ಗಾಂಧಿ ಅರೆಬೆಂದ ನಾಯಕ. ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆತ ಅಯೋಗ್ಯ.ಲೋಕಸಭೆಯಲ್ಲಿ ಅವರು ನಡೆದುಕೊಳ್ಳುವ ರೀತಿ,ಅವರ ಹೇಳಿಕೆಗಳು ಅರೆಹುಚ್ಚರಂತೆ ಇರುತ್ತದೆ.ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸೋದು ಒಳ್ಳೆಯದು.
– ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ಪಕ್ಷ ನಾಯಕರ ಮನೆಯ ಮುಂದೆ ಗೂಂಡಾಗಿರಿ ಮಾಡಿ ದಂಗೆ ಏಳಿಸುತ್ತಿರುವ ಮುಖ್ಯಮಂತ್ರಿಗಳೇ ಅಹಿತಕರ ಘಟನೆಗಳು ನಡೆದರೆ ನೀವೇ ಹೊಣೆ. 36 ಸ್ಥಾನ ಗೆಲ್ಲಿಸಿದ್ದಕ್ಕೆ ಕರುನಾಡನ್ನೇ ಬಲಿಕೊಡಲು ಹೊರಟರಾ ಸಾಂದರ್ಭಿಕ ಶಿಶುಗಳೇ??? ಭಗವಂತ ನಿಮ್ಮನ್ನು ಕ್ಷಮಿಸುವನೇ???
– ಸಿಟಿ ರವಿ