ಸಿಎಂ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ
Team Udayavani, Sep 22, 2018, 6:00 AM IST
ಬೆಂಗಳೂರು: ಸಂವಿಧಾನದಡಿ ಸ್ವೀಕರಿಸಿದ ಪ್ರಮಾಣ ವಚನಕ್ಕೆ ವಿರುದ್ಧವಾಗಿ ಕುಮಾರಸ್ವಾಮಿ ಅವರು ದಂಗೆ ಏಳುವಂತೆ ಜನತೆಗೆ ಪ್ರಚೋದನೆಯ ಕರೆ ನೀಡುವ ಮೂಲಕ ಗಂಭೀರ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಶುಕ್ರವಾರ ದೂರು ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ನಿಯೋಗ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಗೋವಿಂದ ಕಾರಜೋಳ, ರೇಣುಕಾಚಾರ್ಯ, ಎಸ್. ಸುರೇಶ್ ಕುಮಾರ್, ಎಸ್.ಆರ್.ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಇತರರು ನಿಯೋಗದಲ್ಲಿದ್ದರು.
ಮನವಿ ಪತ್ರದ ವಿವರ ಹೀಗಿದೆ: ಹಾಸನದ ಚನ್ನರಾಯಪಟ್ಟಣದಲ್ಲಿ ಕುಮಾರಸ್ವಾಮಿಯವರು ಸರ್ಕಾರವನ್ನು ಅಸ್ಥಿರಗೊಳಿಸಲು ಯಾವುದೇ ಪ್ರಯತ್ನ ಮಾಡಿದರೆ ನನ್ನ ಈ ಪುಣ್ಯ ಭೂಮಿಯಿಂದ ರಾಜ್ಯದ ಜನತೆಗೆ ಬಿಜೆಪಿ ವಿರುದಟಛಿ ದಂಗೆ ಏಳುವಂತೆ ಕರೆ ಕೊಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಮುಂದೆ ಪ್ರತಿಭಟನೆ ಹೆಸರಿನಲ್ಲಿ ಗೂಂಡಾ ವರ್ತನೆ ತೋರಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಮುಂದಾದ ಬಿಜೆಪಿ ಶಾಸಕರು,ಮುಖಂಡರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದು ಮುಖ್ಯಮಂತ್ರಿಗಳ ಹೇಳಿಕೆಯ ನೇರ ಪರಿಣಾಮವಾಗಿದೆ.
ಘಟನೆ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವಲ್ಲಿ ವಿಫಲರಾಗಿದ್ದು, ರಾಜ್ಯದಲ್ಲಿ ಕಾನೂನು,ಸುವ್ಯವಸ್ಥೆ ಇದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂವಿಧಾನದ ನಿಬಂಧನೆಗಳ ಮೇಲೆ ವಿಶ್ವಾಸ ಹಾಗೂ ನಿಷ್ಠೆ ಹೊಂದಿರಬೇಕಾ ದುದು ಅವರ ಕರ್ತವ್ಯ. ಹೀಗಿರುವಾಗ ಪ್ರಮಾಣ ವಚನಕ್ಕೆ ವಿರುದ್ಧವಾಗಿ ದಂಗೆ ಏಳಿ ಎಂಬುದಾಗಿ ಪ್ರಚೋದನೆ ನೀಡುವುದು ಗಂಭೀರ ಅಪರಾಧ. ಮುಖ್ಯಮಂತ್ರಿಗಳ ಪ್ರಚೋದನಾ ಹೇಳಿಕೆ ಉದ್ದೇಶ ಪೂರ್ವಕವಾಗಿದ್ದು, ಐಪಿಸಿ ಸೆಕ್ಷನ್ 121, 121ಎ, 122, 123 ಹಾಗೂ 124ಎ ಅಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ದಂಗೆ ಏಳುವಂತೆ ಜನತೆಗೆ ಸ್ವತಃ ಮುಖ್ಯಮಂತ್ರಿಗಳೇ ಕರೆ ನೀಡಿರುವುದು ಇತಿಹಾಸದಲ್ಲೇ ಮೊದಲು. ಸಂವಿಧಾನಬದ್ಧವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅದರ ವಿರುದ್ಧವಾಗಿ ಹೇಳಿಕೆ ನೀಡಿರುವುದು ರಾಜ್ಯದ ಜನರಲ್ಲೂ ಅಸಮಾಧಾನ ಉಂಟು ಮಾಡಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದಟಛಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ