ಪ್ರತಿತಂತ್ರಕ್ಕೆ ಮುಂದಾದ ಕಾಂಗ್ರೆಸ್-ಜೆಡಿಎಸ್
Team Udayavani, Sep 22, 2018, 6:00 AM IST
ಬೆಂಗಳೂರು: ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಪ್ರತಿತಂತ್ರ ಹೂಡಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ತೀರ್ಮಾನಿಸಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ರಾಜಕೀಯವಾಗಿಯೇ ತಿರುಗೇಟು ನೀಡಲು ನಿರ್ಧರಿಸಲಾಗಿದೆ.
ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಧಿಕೃತ ನಿವಾಸ ಕಾವೇರಿಯಲ್ಲಿ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿ ಸರ್ಕಾರಕ್ಕೆ ಕಂಟಕ ಎದುರಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ.
ಜತೆಗೆ, ಆಪರೇಷನ್ ಕಮಲದ ಮೂಲ ಪತ್ತೆ ಹಚ್ಚಿ ತಿರುಗೇಟು ನೀಡಬೇಕು. ತೀರಾ ಪರಿಸ್ಥಿತಿ ಕೈ ಮೀರಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದಲೂ ಬಿಜೆಪಿ ಶಾಸಕರನ್ನು ಸೆಳೆಯಲು ಮುಂದಾಗುವುದು ಕಾರ್ಯತಂತ್ರದ ಭಾಗ ಎಂದು ಹೇಳಲಾಗಿದೆ.
ಆಪರೇಷನ್ ಕಮಲ ತಡೆಗೆ ತಂತ್ರ:
ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ನ 25 ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎನ್ನುವುದರ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹತ್ತು ಜನ ಬಿಜೆಪಿ ನಾಯಕರು ನೇರವಾಗಿ ಆಪರೇಷನ್ ಕಮಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಸಭೆಯ ಮುಂದಿಟ್ಟ ಕುಮಾರಸ್ವಾಮಿ, ಆಪರೇಷನ್ ಕಮಲ ತಡೆಯುವ ಮಾರ್ಗೋಪಾಯಗಳ ಬಗ್ಗೆ ಪ್ರಸ್ತಾಪಿಸಿದರು. ಆಪರೇಷನ್ ಕಮಲಕ್ಕೆ ಬಂಡವಾಳ ಹಾಕುತ್ತಿರುವವರು ಯಾರು ಎನ್ನುವುದನ್ನು ಮೊದಲು ಪತ್ತೆ ಹಚ್ಚಬೇಕು. ಅದನ್ನು ತಡೆದರೆ ಸರಿಹೋಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.
ಆಪರೇಷನ್ ಹಸ್ತಕ್ಕೂ ರೆಡಿ
ಬಿಜೆಪಿ ಅನೈತಿಕ ಮಾರ್ಗದಲ್ಲಿ ಬಹಿರಂಗವಾಗಿಯೇ ಆಪರೇಷನ್ ಕಮಲ ಮಾಡಲು ಪ್ರಯತ್ನಿಸುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಮಾಡಿದರೂ ಪಕ್ಷ ಹಾಗೂ ಸರ್ಕಾರದ ಮೇಲೆ ಯಾವುದೇ ರೀತಿಯ ಕೆಟ್ಟ ಅಭಿಪ್ರಾಯ ಬರುವುದಿಲ್ಲ ಎಂಬ ಮಾತು ಸಭೆಯಲ್ಲಿ ಕೇಳಿಬಂದಿತು. ಹೀಗಾಗಿ, ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಡುವ ಹಂತ ತಲುಪಿದರೆ ತಕ್ಷಣವೇ ಬಿಜೆಪಿ ಶಾಸಕರ ಸೆಳೆದು ರಾಜಿನಾಮೆ ಕೊಡಿಸಲು ನಿರ್ಧರಿಸಲಾಯಿತು. ಪ್ರಮುಖವಾಗಿ ಮೊದಲ ಬಾರಿ ಶಾಸಕರಾಗಿರುವವರನ್ನು ಸೆಳೆಯಲು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರು ಯಾವುದೇ ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಪ್ರಚೋದನೆ ಹೇಳಿಕೆ ಕೊಡುವುದು ಬೇಡ. ನಮ್ಮಿಂದಲೇ ಆಪರೇಷನ್ ಮೊದಲು ಪ್ರಾರಂಭವಾಗುವುದು ಬೇಡ. ಹಾಗಾದರೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಕಾದು ನೋಡಿ ಮುಂದಿನ ಹೆಜ್ಜೆ ಇಡೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮೊದಲಿಗೆ ನಮ್ಮ ಶಾಸಕರು ಬಿಜೆಪಿಯತ್ತ ಹೋಗುವುದು ತಡೆಯೋಣ. ಅವರ ಜತೆ ನಾವೇ ನಿರಂತರ ಸಂಪರ್ಕದಲ್ಲಿದ್ದು ಏನಾದರೂ ಅಸಮಾಧಾನ ಇದ್ದರೆ ಸರಿಪಡಿಸೋಣ ಎಂದು ಸಲಹೆ ನೀಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡವರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ ಎಂಬ ಅಭಿಪ್ರಾಯವಿದೆ. ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡೋಣ. ಶಾಸಕರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಸೂಚಿಸಿದರು ಎಂದು ತಿಳಿದು ಬಂದಿದೆ.
ದಂಗೆಗೆ ಸಮಜಾಯಿಷಿ
ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಜನರೇ ದಂಗೆ ಏಳುತ್ತಾರೆ ಎಂಬ ಹೇಳಿಕೆಗೆ ಸಿದ್ದರಾಮಯ್ಯ ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಸಂವಿಧಾನಿಕ ಹುದ್ದೆಯಲ್ಲಿರುವವರು ಪದ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ತಮ್ಮ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಜಾಯಿಷಿ ನೀಡಿದರು ಎಂದು ಹೇಳಲಾಗಿದೆ.
ಸಿಗದ ಖಚಿತ ಮಾಹಿತಿ
ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಶಾಸಕರು ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಆದರೂ, ಬಿಜೆಪಿಯವರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಹೀಗಾಗಿ, ಯಾವ್ಯಾವ ಶಾಸಕರು ಬಿಜೆಪಿಯವರ ಆಪರೇಷನ್ ಕಮಲದ ಪಟ್ಟಿಯಲ್ಲಿದ್ದಾರೆ ಎಂಬುದು ನಾಯಕರಿಗೆ ತಲೆಬಿಸಿಯಾಗಿದೆ.
ಹೈಕಮಾಂಡ್ ಸೂಚನೆ
ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆ ತಡೆದು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಸಂಬಂಧ ಕಾರ್ಯಪ್ರವೃತ್ತರಾಗುವಂತೆ ಹೈಕಮಾಂಡ್ನಿಂದ ಶುಕ್ರವಾರ ಸಿದ್ದರಾಮಯ್ಯ ಅವರಿಗೆ ಸೂಚನೆ ಬಂದಿತು. ಹೀಗಾಗಿ, ತಕ್ಷಣ ಅವರು ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ, ಜಲಸಂಪನ್ಮೂಲ ಸಚಿವರನ್ನು ಕರೆಸಿ ಮಾತುಕತೆ ನಡೆಸಿದರು. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
ಸ್ಪೀಕರ್ಗೆ ಜೆಡಿಎಸ್ ದೂರು
ಕಳೆದ ಒಂದು ತಿಂಗಳಿಂದ ಬಿಜೆಪಿಯು ಅನೈತಿಕ ಮಾರ್ಗಗಳ ಮೂಲಕ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಜೆಡಿಎಸ್ ವಿಧಾನಸಭೆ ಸ್ಪೀಕರ್ಗೆ ದೂರು ನೀಡಿದೆ. ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕುಮ್ಮಕ್ಕು ನೀಡುವ ರಾಜಕೀಯ ಪಕ್ಷ, ಸಂಸದರು, ಶಾಸಕರು, ಸಮಾಜ ಘಾತುಕ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಸದೀಯ ವ್ಯವಸ್ಥೆಯನ್ನು ಘಾಸಿಕೊಳಿಸುತ್ತಿರುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.
ಪಕ್ಷದ ವಕ್ತಾರ ರಮೇಶ್ ಬಾಬು ನೇತೃತ್ವದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ನಿಯೋಗ, ಜನತಂತ್ರದ ರಕ್ಷಣೆ, ಮೌಲ್ಯಗಳ ಪ್ರತಿಪಾದನೆ ಮತ್ತು ಸಂಸದೀಯ ವ್ಯವಸ್ಥೆಯನ್ನು ಗೌರವಿಸುವ ಸಲುವಾಗಿ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದೆ.
ನಮ್ಮ ಪಕ್ಷದ ನಾಗಮಂಗಲ ಶಾಸಕರ ಸುರೇಶ್ ಗೌಡರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ 30 ಕೋಟಿ ರೂ. ಆಮಿಷವೊಡ್ಡಿದೆ. ಸಕಲೇಶಪುರ ಶಾಸಕ ಕುಮಾರಸ್ವಾಮಿ, ನಾಗಠಾಣ ಶಾಸಕ ದೇವಾನಂದ ಚೌಹಾಣ್, ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಕಾಂಗ್ರೆಸ್ನ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬೀದರ್ ಶಾಸಕ ರಹೀಂಖಾನ್ ಅವರಿಗೆ ಹಣದ ಆಮಿಷವೊಡ್ಡಿರುವುದಾಗಿ ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿ ಬರುತ್ತಿವೆ. ರಾಜಕೀಯ ಪ್ರಭಾವ, ಬೆದರಿಕೆ, ಒತ್ತಡ ಅಥವಾ ಹಣದ ಆಮಿಷಕ್ಕಾಗಿ ಆಯ್ಕೆಯಾದ ಸ್ಥಾನಕ್ಕೆ ರಾಜೀನಾಮೆ ನೀಡುವ ಯಾವುದೇ ಶಾಸಕರ ಪ್ರಯತ್ನವನ್ನು ಸಭಾಧ್ಯಕ್ಷರಾಗಿ ನೀವು ತಡೆಯಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಸಿಎಂ ಕುಮಾರಸ್ವಾಮಿಯವರದು ತಾಯಿ ಹೃದಯ. ಅವರು ದಂಗೆ ಪದ ಭಾವನಾತ್ಮಕವಾಗಿ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ರಾಜ್ಯ ಹೊತ್ತಿ ಉರಿಯುತ್ತಿದೆ ಎಂದು ಹೇಳುತ್ತಾರೆ. ಸದಾನಂದಗೌಡರು ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಇವರಿಗೆಲ್ಲಾ ಯಾವ ನೈತಿಕತೆ ಇದೆ?
– ಟಿ.ಎ. ಶರವಣ, ಜೆಡಿಎಸ್ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ