ಹಾಡಹಗಲೇ ಮಾಜಿ ಮೇಯರ್ ಹತ್ಯೆ
Team Udayavani, Oct 1, 2018, 6:00 AM IST
ತುಮಕೂರು: ಶೈಕ್ಷಣಿಕ ನಗರಿ ಎಂದೇ ಕರೆಯಲಾಗುವ ತುಮಕೂರಿನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ರಕ್ತದ ಕೋಡಿ ಹರಿದಿದೆ. ಮಾಜಿ ಮೇಯರ್, ಹಾಲಿ ಪಾಲಿಕೆ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಚ್. ರವಿಕುಮಾರ್ ಅವರನ್ನು ಏಳು ಮಂದಿ ಸದಸ್ಯರಿರುವ ದುಷ್ಕರ್ಮಿಗಳ ತಂಡ ಸಿನೀಮಿಯ ರೀತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ. ಘಟನೆಯಿಂದ ತುಮಕೂರು ಜನತೆ ಬೆಚ್ಚಿಬಿದ್ದಿದೆ.
22ನೇ ವಾರ್ಡ್ನ ಪಾಲಿಕೆ ಸದಸ್ಯರಾಗಿರುವ ಮಾಜಿ ಮೇಯರ್ ಎಚ್. ರವಿಕುಮಾರ್ ತಮ್ಮ ವಾರ್ಡ್ನಲ್ಲಿ ಸಂಚರಿಸಿ ಬಟವಾಡಿಯಲ್ಲಿ ಬಳಿ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹೊಡೆದು ನಡು ರಸ್ತೆಯಲ್ಲಿಯೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನೆ ನಡೆದದ್ದು ಹೀಗೆ?:
ನಗರ ಪಾಲಿಕೆ ಸದಸ್ಯ ಎಚ್. ರವಿಕುಮಾರ್ ಟೀ ಕುಡಿಯುತ್ತಾ ಕುಳಿತಿದ್ದ ವೇಳೆ ಅಂಗಡಿ ಬಳಿಗೆ ಹಾಲಿನ ವಾಹನ ಎಂಬಂತೆ ಇದ್ದ ಬ್ಯಾನರ್ ಉಳ್ಳ 407 ಮಿನಿ ಟ್ರಕ್ ಬಂದಿದೆ. ವಾಹನದಿಂದ ಇಳಿದ ಒಬ್ಬ ವ್ಯಕ್ತಿ ಅಂಗಡಿಗೆ ಬಂದು ಸಿಗರೆಟ್ ಮತ್ತು ಪಾನ್ಪರಾಗ್ ತೆಗೆದುಕೊಂಡಿದ್ದಾನೆ. ನಂತರ ತನ್ನ ಕೈಯಲ್ಲಿದ್ದ ಕವರ್ನಿಂದ ಖಾರದ ಪುಡಿಯನ್ನು ರವಿಕುಮಾರ್ ಅವರ ಕಣ್ಣಿಗೆ ಎರಚಿದ್ದಾನೆ. ಅವರ ಜೊತೆಯಲ್ಲಿದ್ದ ಸ್ನೇಹಿತನಿಗೂ ಎರಚಲು ಪ್ರಯತ್ನಿಸಿದ್ದಾನೆ.
ಖಾರದ ಪುಡಿ ಒರೆಸಿಕೊಳ್ಳುತ್ತಲೇ ರವಿಕುಮಾರ್ ಮತ್ತು ಸ್ನೇಹಿತ ತಕ್ಷಣ ಎಚ್ಚೆತ್ತು ಓಡಲಾರಂಭಿಸಿದ್ದಾರೆ. ಅಷ್ಟರಲ್ಲಿ ವಾಹನದಲ್ಲಿದ್ದ ಐದಾರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಹತ್ಯೆಗೈದಿದ್ದಾರೆ. ಕಣ್ಣಿಗೆ ಖಾರದಪುಡಿ ಎರಚಿದ್ದರಿಂದ ರವಿಕುಮಾರ್ ಅವರಿಗೆ ವೇಗವಾಗಿ ಓಡಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರವಿಕುಮಾರ್ ಕುತ್ತಿಗೆ ಮತ್ತು ತಲೆ ಛಿದ್ರವಾಗುವಷ್ಟು ಭೀಕರವಾಗಿ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ರವಿಕುಮಾರ್ ಜೊತೆಗಿದ್ದ ಅವರ ಸ್ನೇಹಿತ ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಜನನಿಬಿಡ ಪ್ರದೇಶಕ್ಕೆ ಓಡಿ ಹೋಗಿದ್ದರಿದ್ದರಿಂದ ಪ್ರಾಣ ಉಳಿದಿದೆ ಎನ್ನಲಾಗಿದೆ.
ಜೆಡಿಎಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದ ರವಿಕುಮಾರ್ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 22ನೇ ವಾರ್ಡ್ನಿಂದ ಕಳೆದ ಆ.31ರಂದು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಾಲಿಕೆ ಸದಸ್ಯರಾಗಿ ಮರು ಆಯ್ಕೆಯಾಗಿದ್ದರು. ಕಳೆದ ಬಾರಿ ಮಹಾನಗರ ಪಾಲಿಕೆಯ ಮಹಾಪೌರರಾಗಿಯೂ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು.
ಪರಾರಿಯಾದ ದುಷ್ಕರ್ಮಿಗಳು:
ತೀವ್ರ ಗಾಯಗೊಂಡಿದ್ದ ರವಿಕುಮಾರ್ ಸ್ಥಳದಲ್ಲೇ ಕುಸಿಯುವ ಮಟ್ಟಕ್ಕೆ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿ¨ªಾರೆ. ಘಟನೆ ನಡೆದ ವೇಳೆ ಟೀ ಅಂಗಡಿಯ ಮಾಲೀಕ ಮತ್ತು ಕೊಲೆಯಾಗಿರುವ ರವಿಕುಮಾರ್ ಮತ್ತು ಆತನ ಸ್ನೇಹಿತ ಬಿಟ್ಟರೆ ಬೇರೆ ಯಾರೂ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.