ಬಸ್ ಪ್ರಯಾಣ ದರ ಏರಿಕೆ ಇಂದು ನಿರ್ಧಾರ: ತಮ್ಮಣ್ಣ
Team Udayavani, Oct 4, 2018, 6:50 AM IST
ಮಂಡ್ಯ: ಬೆಂಗಳೂರಿನಲ್ಲಿ ಗುರುವಾರ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಬಸ್ ಪ್ರಯಾಣ ದರ ಏರಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಬಸ್ ಪ್ರಯಾಣ ದರ ಏರಿಕೆ ವಿಚಾರ ಇದೀಗ ಮುಖ್ಯಮಂತ್ರಿ ಅಂಗಳದಲ್ಲಿದೆ. ಕುಮಾರಸ್ವಾಮಿ ಏನು ತೀರ್ಮಾನ ಮಾಡುವರೋ ಅದರಂತೆ ಬಸ್ ದರ ಏರಿಕೆಯಾಗಲಿದೆ. ಬಸ್ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಿಸಲು ತೀರ್ಮಾನಿಸಿದ್ದೆವು. ಈಗ ಆದಷ್ಟು ಕಡಿಮೆ ಮಾಡಲು ಚಿಂತನೆ ನಡೆಸಿದ್ದೇವೆ.
ಸಾರಿಗೆ ಇಲಾಖೆ ಈಗಾಗಲೇ 6 ಸಾವಿರ ಕೋಟಿ ರೂ.ನಷ್ಟದಲ್ಲಿದೆ. 1.20 ಲಕ್ಷ ನೌಕರರ ಭವಿಷ್ಯವೂ ಇಲಾಖೆ ಮೇಲೆ ಇದೆ. ಸಾರಿಗೆ ಇಲಾಖೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಬಸ್ ದರ ಏರಿಕೆ ಅನಿವಾರ್ಯ. ಏ.1 ರಿಂದ ಇಲ್ಲಿಯವರೆಗೆ 1 ಲೀಟರ್ ಪೆಟ್ರೋಲ್ನ ಬೆಲೆ 13.50 ರೂ.ನಷ್ಟು ಹೆಚ್ಚಾಗಿದೆ. ತೈಲ ದರ ಹೆಚ್ಚಳ ಸಾರಿಗೆ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಜನರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಸಾರಿಗೆ ಇಲಾಖೆ, ನಷ್ಟದಿಂದ ಚೇತರಿಸಿಕೊಳ್ಳಲು ದರ ಹೆಚ್ಚಳ ಮಾಡಬೇಕಿದೆ ಎಂದರು.