ಕಾಂಗ್ರೆಸ್ ಸೇರುವುದು ಶತಸಿದ್ಧ: ಆರ್.ಶಂಕರ್
Team Udayavani, Oct 8, 2018, 6:05 AM IST
ಚಿಕ್ಕಬಳ್ಳಾಪುರ: “ಯಾರಿಗೂ ಅನುಮಾನ ಬೇಡವೇ ಬೇಡ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಶತಸಿದ್ಧ. ಸಂಪುಟ ವಿಸ್ತರಣೆ ವೇಳೆ ನನ್ನ ಖಾತೆ ಬದಲಾವಣೆ ಆಗುತ್ತದೆ. ಮಂತ್ರಿ ಪದವಿ ಕೈ ತಪ್ಪುತ್ತದೆ ಎನ್ನುವುದು ಬರೀ ಉಹಾಪೋಷ. ನನ್ನ ಖಾತೆ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ’ ಎಂದು ಅರಣ್ಯ ಸಚಿವ ಆರ್.ಶಂಕರ್ ಸ್ಪಷ್ಟಪಡಿಸಿದರು.
ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ವಿಸ್ತರಣೆಯಲ್ಲಿ ನನ್ನ ಖಾತೆ ಬದಲಾವಣೆಯೂ ಆಗುವುದಿಲ್ಲ. ಮಂತ್ರಿ ಪದವಿಯನ್ನು ನಾನು ಕಳೆದುಕೊಳ್ಳುವುದೂ ಇಲ್ಲ. ಎರಡನೇ ಹಂತದ ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತದೆ. ಯಾರ್ಯಾರಿಗೆ ಖಾತೆ ದೊರೆಯುತ್ತದೆ ಎಂದು ನಾನು ಹೇಳಲು ಆಗುವುದಿಲ್ಲ. ಅದು ಪಕ್ಷದ ವರಿಷ್ಠರಿಗೆ ಬಿಟ್ಟ ತಿರ್ಮಾನ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ಆಗುತ್ತದೆ. ಅಷ್ಟಕ್ಕೂ ನನಗೆ ನನ್ನದೇ ಖಾತೆಯ ಬಗ್ಗೆ ಮಾಡಲು ಸಾಕಷ್ಟು ಕೆಲಸಗಳಿರುವಾಗ ಬೇರೆ ವಿಚಾರಗಳ ಬಗ್ಗೆ ಏಕೆ ಉಸಾಬರಿ ಎಂದರು.