ಖಾಸಗಿ ಬಸ್ ಢಿಕ್ಕಿಯಾಗಿ ದಸರಾ ಆನೆ ರೌಡಿ ರಂಗ ದುರ್ಮರಣ
Team Udayavani, Oct 8, 2018, 10:38 AM IST
ಮಡಿಕೇರಿ: ದಸರಾಗೆ ಸಹಾಯಕ ಆನೆಯಾಗಿ ತೆರಳಬೇಕಿದ್ದ ರೌಡಿ ರಂಗ ಎಂಬ ಹೆಸರಿನ 45 ವರ್ಷ ಪ್ರಾಯದ ಆನೆಯೊಂದು ಸೋಮವಾರ ನಡೆದ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದೆ.
ಕೇರಳದ ಕಣ್ಣಾನೂರಿನಿಂದ ಬರುತ್ತಿದ್ದ ಖಾಸಗಿ ಬಸ್ಸೊಂದು ರಸ್ತೆಯಲ್ಲಿದ್ದ ಆನೆಗೆ ಢಿಕ್ಕಿಯಾಗಿದೆ. ಪರಿಣಾಮವಾಗಿ ಆನೆ ಸೊಂಟ ಮುರಿತಕ್ಕೊಳಗಾಗಿ ಸ್ಥಳದಲ್ಲೇ ಕುಸಿದಿದೆ. ಅರಣ್ಯ ಸಿಬಂದಿಗಳು, ಪಶುವೈದ್ಯರು ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದರು ತೀವ್ರವಾಗಿ ಗಾಯಗೊಂಡಿದ್ದ ಆನೆ ಕೊನೆಯುಸಿರೆಳೆದಿದೆ.
ನಸುಕಿನ 2 ಗಂಟೆಯ ವೇಳೆ ಮತ್ತಿಗೋಡು ಆನೆ ಕ್ಯಾಂಪ್ ಬಳಿ ಈ ಅವಘಡ ನಡೆದಿದೆ.
ಘಟನೆಯ ಕುರಿತು ಖಾಸಗಿ ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
3 ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ಪುಂಡಾಟ ನಡೆಸುತ್ತಿದ್ದ ಆನೆಯನ್ನು ಸೆರೆ ಹಿಡಿದು, ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು. ರೌಡಿ ರಂಗ ಎಂಬ ಹೆಸರಿನಿಂದ ಸುದ್ದಿಯಾಗಿದ್ದ ಆನೆ ಇನ್ನೆರಡು ದಿನಗಳಲ್ಲಿ ವಿಶ್ವವಿಖ್ಯಾತ ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ವಿಧಿ ಇನ್ನೆಲ್ಲಿಗೋ ಕರೆದೊಯ್ದಿದೆ.