ಬಿಜೆಪಿಗೆ ಜನರು ಸರಿಯಾದ ಪಾಠ ಕಲಿಸಬೇಕು: ಸಿಎಂ ಕುಮಾರಸ್ವಾಮಿ ಕರೆ
Team Udayavani, Oct 15, 2018, 7:07 PM IST
ರಾಮನಗರ : ‘ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಜನರು ಮುಂಬರಲಿರುವ ಚುನಾವಣೆಗಳಲ್ಲಿ ಸರಿಯಾದ ಪಾಠ ಕಲಿಸಬೇಕು’ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ‘ದೇಶಾದ್ಯಂತ ಈಚೆಗೆ ನಡೆದಿರುವ ಹಲವಾರು ಉಪ ಚುನಾವಣೆಗಳಲ್ಲಿ ಜನರು ಬಿಜೆಪಿಯನ್ನು ಸೋಲಿಸಿದ್ದಾರೆ. ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಿದ ಫಲಶ್ರುತಿ ಇದಾಗಿದೆ. ಹಾಗಾಗಿ ದೇಶವನ್ನು ಕಾಂಗ್ರೆಸ್ ಮುಕ್ತ ಗೊಳಿಸುವ ಬಿಜೆಪಿಯ ಕನಸು ನನಸಾಗದು’ ಎಂದು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸುವುದು ಖಚಿತ; ಆ ಬಗ್ಗೆ ಯಾರಿಗೂ ಅನುಮಾನ ಬೇಡ; ರಾಜ್ಯದಲ್ಲಿನ ಮೈತ್ರಿ ಸರಕಾರ ಭದ್ರವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
‘ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಕೂಟ ಭರ್ಜರಿ ದಾಖಲೆಯ ಜಯ ಗಳಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
‘ಯಾವುದೇ ಒಂದು ಕ್ಷೇತ್ರಕ್ಕಾಗಿ ದೇಶದ ಹಿತ ಮರೆಯಕೂಡದು. ಎಲ್ಲರೂ ಒಗ್ಗಟ್ಟಾಗಿ ಪರಿಶ್ರಮಿಸಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಮತ್ತು ಆ ಮೂಲಕ ಬಿಜೆಪಿಗೆ ಸೋಲಿನ ಪಾಠ ಕಲಿಸಬೇಕು’ ಎಂದು ಕುಮಾರಸ್ವಾಮಿ ಹೇಳಿದರು.