ಮೊಳಕಾಲ್ಮೂರು, ಬಾದಾಮಿ: ಶ್ರೀರಾಮುಲುವಿಗೇನು ಸಂಬಂಧ? ಉಗ್ರಪ್ಪ
Team Udayavani, Oct 16, 2018, 12:13 PM IST
ಬಳ್ಳಾರಿ: ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಕಾಂಗ್ರೆಸ್ನ ಅಚ್ಚರಿ ಅಭ್ಯರ್ಥಿಯಾಗಿರುವ ವಿ.ಎಸ್. ಉಗ್ರಪ್ಪ ಅವರು ನನಗೂ ಬಳ್ಳಾರಿಗೂ ಸಂಬಂಧ ಇದೆ ಎಂದು ಬಿಜೆಪಿ ಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ ಅವರು ನಾನು ಹೊರಗಿನವ ಅನ್ನುವುದಾದರೆ ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಏನು ಸಂಬಂಧವಿದೆ? ಹಿಂದೆ ರಾಯಚೂರಿನಲ್ಲಿ ಯಾರು ಸ್ಪರ್ಧಿಸಿದ್ದರು ಎಂದು ತಿರುಗೇಟು ನೀಡಿದರು.
ನಾನು ಸರ್ವಾನುಮತದ ಅಭ್ಯರ್ಥಿ. ಪಕ್ಷದಲ್ಲಿ ಒಗ್ಗಟ್ಟು ಇದೆ ಎಂದು ಇದೇ ವೇಳೆ ಉಗ್ರಪ್ಪ ಹೇಳಿದರು.
ಭರ್ಜರಿ ಮೆರವಣಿಗೆ; ಪೈಪೋಟಿ
ನಾಮಪಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದ್ದು ಬಲಾಬಲದ ಪ್ರದರ್ಶನ ನಡೆದಿದೆ.
ಉಭಯ ಪಕ್ಷಗಳ ಸಾವಿರಾರು ಕಾರ್ಯಕರ್ತರು ಏಕಕಾಲದಲ್ಲಿ ಮೆರವಣಿಗೆ ನಡೆಸುವ ಮೂಲಕ ನಾಮಪತ್ರ ಸಲ್ಲಿಕೆಗೆ ತೆರಳಿದ್ದಾರೆ.
ಬಿಜೆಪಿ ಅಭ್ಯರ್ಥಿಗೆ ನಾಯಕರಾದ ಬಿ.ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರು ಸಾಥ್ ನೀಡಿದರೆ. ಉಗ್ರಪ್ಪ ಅವರಿಗೆ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಾಥ್ ನೀಡಿದ್ದಾರೆ.