ಶಿವಮೊಗ್ಗ : ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಮಪತ್ರ
Team Udayavani, Oct 16, 2018, 3:22 PM IST
ಶಿವಮೊಗ್ಗ : ರಾಜ್ಯದಲ್ಲಿ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆಯೇ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದರು.
ಅಂದ ಹಾಗೆ ಮಧು ಬಂಗಾರಪ್ಪ ಅವರು ರಾಜ್ಯದಲ್ಲಿನ ಮೈತ್ರಿ ಸರಕಾರದ ಭಾಗೀದಾರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ನ ಒಮ್ಮತದ ಅಭ್ಯರ್ಥಿಯಾಗಿರುವುದು ಗಮನಾರ್ಹವಾಗಿದೆ. ಮಧು ಬಂಗಾರಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿರುವ ಬಿ ವೈ ರಾಘವೇಂದ್ರ ವಿರುದ್ಧ ಸೆಣಸಲಿದ್ದಾರೆ.
ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರಿಂದು ಶಿವಮೊಗ್ಗಕ್ಕೆ ಆಗಮಿಸಿ ಮಧು ಬಂಗಾರಪ್ಪ ಜತೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಸಚಿವೆ ಜಯಮಾಲಾ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಭದ್ರಾವತಿ ಶಾಸಕ ಸಂಗಮೇಶ್, ಮಾಜಿ ಶಾಸಕಿ ಶರದಾ ಪೂರ್ಯಾ ನಾಯಕ್, ಮಾಜಿ ಶಾಸಕ ಕೋನಾರೆಡ್ಡಿ ಮತ್ತಿತರು ಜತೆಗೂಡಿ “ಮೈತ್ರಿ ಬಲ’ವನ್ನು ಸಾದರ ಪಡಿಸಿದರು.