ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ:ಸಿದ್ದರಾಮಯ್ಯ
Team Udayavani, Oct 18, 2018, 7:19 AM IST
ಗುಳೇದಗುಡ್ಡ (ಬಾಗಲಕೋಟೆ): ನನಗೀಗ 71 ವರ್ಷ ವಯಸ್ಸಾಗುತ್ತಾ ಬಂತು. ಹೀಗಾಗಿ, ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾತನಾಡಿ, “ನಾನು ಈವರೆಗೆ ಒಟ್ಟು 13 ಚುನಾವಣೆ ಎದುರಿಸಿದ್ದೇನೆ. ಅದರಲ್ಲಿ 8 ಚುನಾವಣೆ ಗೆದ್ದಿದ್ದೇನೆ. ರಾಜ್ಯದ ಜನರ ನಿರಂತರ ಸೇವೆ ಮಾಡಿದ್ದೇನೆ. ನಾನೀಗ ಉತ್ತರ ಕರ್ನಾಟಕದವನೇ ಆಗಿದ್ದೇನೆ’ ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಜನ, “ನೀವು ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಈಗ 13 ಚುನಾವಣೆ ಮುಗಿಸಿದ್ದೀರಿ. 15 ಚುನಾವಣೆಗಳನ್ನು ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು. ಆಗ, ಏ ಸುಮ್ಮನಿರಪ್ಪಾ, ನನ್ನ 15ನೇ ಚುನಾವಣೆ ಅಂದ್ರೆ ಇನ್ನೂ 20 ವರ್ಷ ಬೇಕ್ರಯ್ಯ. ಅದೆಲ್ಲ ಬೇಡ. ಇನ್ನು ಚುನಾವಣೆ ಸಾಕು ಎಂದರು.
ಶೋಭಾಗೆ ಕಾಮನ್ಸೆನ್ಸ್ ಇಲ್ಲ: ಈ ಮಧ್ಯೆ, ಶೋಭಾ ಕರಂದ್ಲಾಜೆ ತಮ್ಮನ್ನು ಹಲ್ಲಿಲ್ಲದ ಹಾವು ಎಂದು ಕರೆದಿರುವುದಕ್ಕೆ ಟಾಂಗ್ ನೀಡಿದ ಅವರು, “ಶೋಭಾಗೆ ಕಾಮನ್ಸೆನ್ಸ್ ಇಲ್ಲ. ನಾನಂತೂ ಹಾವಲ್ಲ. ನಾನೊಬ್ಬ ಮಾನವೀಯತೆ ಇರುವ ಮನುಷ್ಯ. ಶೋಭಾ ಹಾವಿನ ಕುಟುಂಬಕ್ಕೆ ಸೇರಿದ್ದಾರೋ, ಇಲ್ಲವೋ ಗೊತ್ತಿಲ್ಲ. ಹಾವಿಗೆ ಹಲ್ಲು ಇರಲಿ, ಇರದೇ ಇರಲಿ. ಹಾಲು ಎರೆಯಲೇಬೇಕು. ಹಾಲಿಗೂ- ಹಾವಿಗೂ ಏನು ಸಂಬಂಧ. ಹಾಲು ಕುಡಿಯಲು ಹಲ್ಲು ಬೇಕಾ. ಶೋಭಾಗೆ ಜವಾಬ್ದಾರಿ ಇಲ್ಲ ಅನಿಸುತ್ತೆ. ಜವಾಬ್ದಾರಿಯಿಂದ ಮಾತನಾಡಬೇಕು’ ಎಂದರು.