ಕಾಂಗ್ರೆಸ್ಗೆ ಮಿತ್ರ ಪಕ್ಷಗಳೇ ಕೈ ಕೊಡ್ತಿವೆ
Team Udayavani, Oct 23, 2018, 6:30 AM IST
ಶಿವಮೊಗ್ಗ: ಕಾಂಗ್ರೆಸ್ ಪಕ್ಷ 45 ಲೋಕಸಭೆ ಸ್ಥಾನಗಳನ್ನೂ ಗೆದ್ದಿಲ್ಲ. ಆ ಪಕ್ಷದವರು ಹಾಗೂ ಮಿತ್ರ ಪಕ್ಷದವರೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ವಿರೋಧಿಸಲಾರಂಭಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿನವರಿಗೆ ನಿಂತಿರುವ ನೆಲವೇ ಕುಸಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಯಾವತಿ ಅವರು ಮೈತ್ರಿಯಿಂದ ಈಗಾಗಲೇ ಹೊರಹೋಗಿದ್ದಾರೆ. ಇನ್ನು ಮುಂದೆ ಯಾವೆಲ್ಲ ಪಕ್ಷಗಳು ಹೊರ ಹೋಗುತ್ತವೆ ನೋಡಬೇಕಿದೆ. ಮಿತ್ರ ಪಕ್ಷಗಳೇ ಕಾಂಗ್ರೆಸ್ಗೆ ಕೈ ಕೊಡುತ್ತಿವೆ ಎಂದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರದಲ್ಲೂ ಓಡಾಡಿ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು. ಮಂಡ್ಯ ಕ್ಷೇತ್ರದಲ್ಲಿ ಡಾ.ಸಿದ್ದರಾಮಯ್ಯ ಪರವಾಗಿ ಮಂಗಳವಾರ ಪ್ರಚಾರಕ್ಕೆ ಹೋಗುತ್ತೇನೆ. ಬುಧವಾರ ಜಮಖಂಡಿ,ಅದರ ಮರುದಿನ ಶಿವಮೊಗ್ಗಕ್ಕೆ ಪ್ರಚಾರಕ್ಕೆ ಬರುತ್ತೇನೆ.ಬಳಿಕ ಬಳ್ಳಾರಿ ಹಾಗೂ ರಾಮನಗರದಲ್ಲಿ ಪ್ರಚಾರ ನಡೆಯಲಿದೆ ಎಂದರು.
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಕುರಿತು ಪ್ರತಿಕ್ರಿಯಿಸಲ್ಲ. ಈ ಬಗ್ಗೆ ದೂರು ದಾಖಲಾಗಿದೆ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ ಎಂದರು.