3 ದಿನಗಳ ಕಿತ್ತೂರು ಉತ್ಸವಕ್ಕೆ ಚಾಲನೆ
Team Udayavani, Oct 24, 2018, 6:00 AM IST
ಚನ್ನಮ್ಮನ ಕಿತ್ತೂರು(ರಾಣಿ ಕಿತ್ತೂರು ಚನ್ನಮ್ಮ ವೇದಿಕೆ): ಕಿತ್ತೂರು ಚನ್ನಮ್ಮಳನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸದೆ ದೇಶಾದ್ಯಂತ ಕಿತ್ತೂರು ಚನ್ನಮ್ಮ ಇತಿಹಾಸ ಪ್ರಚಾರ ಮಾಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಕಿತ್ತೂರು ಪಟ್ಟಣದಲ್ಲಿ ಮೂರು ದಿನಗಳ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಚನ್ಮಮ್ಮಳ ಗತ ವೈಭವದ ಕಾರ್ಯಕ್ರಮ ಎಲ್ಲ ರಾಜ್ಯಗಳಲ್ಲೂ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂಸದರು ಕೇಂದ್ರದ ಗಮನಕ್ಕೆ ತರಬೇಕು. ಕಿತ್ತೂರು ಉತ್ಸವ ನೆನಪಿನಲ್ಲಿ ಉಳಿಯುವಂತೆ ಮಾಡಬೇಕೆಂದರೆ ಕೈ ಬಿಚ್ಚಿ ಅನುದಾನ ನೀಡುವಂತೆ ಮುಖ್ಯ ಮಂತ್ರಿಗೆ ಮನವಿ ಮಾಡಲಾಗಿತ್ತು. ಅದರಂತೆ ಅವರು ಹಣ ಬಿಡುಗಡೆ ಮಾಡಿದ್ದಾರೆ. ಈ ಪವಿತ್ರ ಸ್ಥಳ ಅಭಿವೃದ್ಧಿಗೆ ಸರಕಾರ ಕೈಜೋಡಿಸಲಿದೆ ಎಂದು ಹೇಳಿದರು.
ದೆಹಲಿ ಜೆಎನ್ಯುಯಂತೆ ಚನ್ನಮ್ಮ ವಿವಿ ಅಗದಿರಲಿ: ಸಂಸದ ಸುರೇಶ ಅಂಗಡಿ ಮಾತನಾಡಿ, ದುಷ್ಟ ಶಕ್ತಿ ಹಾಗೂ ದೇಶದ್ರೋಹಿಗಳ ಕುತಂತ್ರದಿಂದಾಗಿ ರಾಣಿ ಚನ್ನಮ್ಮ ವಿವಿಯ ಹೆಸರು ಕೆಡಿಸುವ ಷಡ್ಯಂತ್ರ ನಡೆದಿದೆ. ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ನಡೆಯುತ್ತರುವ ಅರ್ಬನ್ ನಕ್ಸಲ್ ಹಾವಳಿ ನಮ್ಮ ಚನ್ನಮ್ಮ ವಿವಿಗೂ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ, ಅಂಥ ದುಷ್ಟ ಶಕ್ತಿಯ ಆಟ ಬೆಳಗಾವಿ ಯಲ್ಲಿ ಆಗಬಾರದು. ದೇಶದ ಆಭದ್ರತೆ ತಡೆಯುವ ನಿಟ್ಟಿನಲ್ಲಿ ರಾಣಿ ಚನ್ಮಮ್ಮ ವಿವಿ ದೇಶದಲ್ಲಿಯೇ ಮುಂಚೂಣಿಯಲ್ಲಿ
ಇರಬೇಕು ಎಂದು ಹೇಳಿದರು.
ಸಿಎಂ-ಉಸ್ತುವಾರಿ ಸಚಿವರ ಗೈರು: ಕಿತ್ತೂರು ಉತ್ಸವಕ್ಕೆ ಬರಬೇಕಾಗಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗೈರು ಎದ್ದು ಕಂಡು ಬಂತು. ಈ ಸಲವೂ ಮುಖ್ಯಮಂತ್ರಿಗಳು ಬಾರದಿರುವುದು ಕಿತ್ತೂರು ನಾಡಿನ ಜನರಲ್ಲಿ ನಿರಾಸೆ ಮೂಡಿಸಿತು.