ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
Team Udayavani, Nov 6, 2018, 6:50 AM IST
ಬೆಂಗಳೂರು: ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ಕಾರ್ಯದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಸಾಗಿಸಲು ಕಾಂಗ್ರೆಸ್, ಜೆಡಿಎಸ್ ಮುಖಂಡರ ಒಡೆತನದ ಶಾಲೆಗಳ ವಾಹನ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯು ಮತ ಎಣಿಕೆ ಪ್ರಕ್ರಿಯೆಗಾದರೂ ಸರ್ಕಾರಿ ವಾಹನ ಬಳಸುವಂತೆ ಸೂಚನೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಅವರು ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದರು.
ಉಪಚುನಾವಣೆಯ ಮತದಾನ ಪ್ರಕ್ರಿಯೆಗೆ ಇವಿಎಂ ಸಾಗಿಸಲು ಕೆಲ ಖಾಸಗಿ ಸಂಸ್ಥೆಗಳನ್ನು ಬಳಸಿರುವುದರ ಔಚಿತ್ಯ ಗೊತ್ತಾಗುತ್ತಿಲ್ಲ. ಕೆಎಸ್ಆರ್ಟಿಸಿ ಬಸ್ ಬಳಸಲು ಅವಕಾಶವಿದ್ದರೂ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಹಾಗೂ ಜೆಡಿಎಸ್ ಮುಖಂಡರ ಒಡೆತನದ ಶಾಲೆಗಳಿಗೆ ಸಂಬಂಧಪಟ್ಟ ವಾಹನಗಳನ್ನು ಮತದಾನ ಪ್ರಕ್ರಿಯೆಗೆ ಬಳಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಂ.ಬಿ.ಪಾಟೀಲ್ ಅವರ ಒಡೆತನದ ಶಾಲೆಯ ವಾಹನವನ್ನೇ ಬಳಸಿದ್ದು, ಫಲಿತಾಂಶ ಪ್ರಕಟವಾದ ಬಳಿಕ ಕೆಲ ಇವಿಎಂ ಯಂತ್ರಗಳು ಖಾಸಗಿ ಮಳಿಗೆಯಲ್ಲಿ ಕಂಡುಬಂದಿದ್ದನ್ನು ಸ್ಮರಿಸಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ನ.3ರಂದೇ ದಾಖಲೆ ಸಹಿತ ದೂರು ನೀಡಿದರೂ ಮತ್ತೆ ಖಾಸಗಿ ವಾಹನ, ಜೀಪ್ನಲ್ಲಿ ಇವಿಎಂ ಸಾಗಿಸಿರುವುದು ಎಷ್ಟು ಸರಿ. ಜಮಖಂಡಿ ವಿಧಾನಸಭಾ ಕ್ಷೇತ್ರದ ಕೊಣ್ಣೂರು ಗ್ರಾಮದ 8 ಇವಿಎಂ ಯಂತ್ರಗಳ ಪೈಕಿ ಆರು ಯಂತ್ರಗಳನ್ನು ಬಸ್ನಲ್ಲಿ ಹಾಗೂ ಎರಡು ಇವಿಎಂಗಳನ್ನು ಖಾಸಗಿ ಜೀಪ್ನಲ್ಲಿ ಸಾಗಿದ್ದೇಕೆ. ಈ ಲೋಪಗಳನ್ನು ಸರಿಪಡಿಸುವಂತೆ ಜಮಖಂಡಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿಯವರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಖಾಸಗಿ ವಾಹನವನ್ನು ಬಳಸಿಕೊಳ್ಳಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಈ ಎಲ್ಲ ಅವಾಂತರಗಳಿಗೆ ಚುನಾವಣಾ ಆಯೋಗವೇ ಹೊಣೆಯಾಗಲಿದ್ದು, ಆಯೋಗವೇ ಉತ್ತರಿಸಬೇಕು. ಮಂಗಳವಾರ ಮತ ಎಣಿಕೆ ನಡೆಯುವ ಸ್ಥಳಕ್ಕೆ ಇವಿಎಂ ಯಂತ್ರಗಳನ್ನು ಸಾಗಿಸಲು ಸರ್ಕಾರಿ ವಾಹನಗಳನ್ನೇ ಬಳಸಲು ಎಲ್ಲ ಕ್ಷೇತ್ರದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಬಿಜೆಪಿ ಮನವಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ