ಗೌಡರಿಂದ ಬಿಜೆಪಿ ಬಾಗಿಲು ಮುಚ್ಚಿಸೋದು ಅಸಾಧ್ಯ
Team Udayavani, Oct 29, 2018, 6:00 AM IST
ಶಿವಮೊಗ್ಗ: ಲೋಕಸಭೆ ಉಪ ಚುನಾವಣೆಗೆ ಗೌಡರ ಇಡೀ ತಂಡವೇ ಬಂದು ಪ್ರಚಾರ ಮಾಡಿದರೂ ಬಿಜೆಪಿಯ ಬಾಗಿಲು ಮುಚ್ಚಿಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ನಾಯಕರಾದ ಜವಾಹರ ಲಾಲ್ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕೈಯಿಂದಲೇ ಆಗದ್ದು, ಗೌಡರಿಂದ ಆಗಲು ಹೇಗೆ ಸಾಧ್ಯ? ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ. ನಗರದ ವಾಸವಿ ಶಾಲಾ ಆವರಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ. ಇಂತಹ ನೂರು ಸಿದ್ದರಾಮಯ್ಯ, ದೇವೇಗೌಡರು ಬಂದರೂ ಬಿಜೆಪಿಯ ಬಾಗಿಲು ಮುಚ್ಚಿಸುವುದು ಅಸಾಧ್ಯ ಎಂದು ತಿರುಗೇಟು ನೀಡಿದರು.
ಆಂಧ್ರಪ್ರದೇಶದ ಮಗಳಾಗಿರುವ ಬಿಜೆಪಿ ಅಭ್ಯರ್ಥಿ ಜೆ. ಶಾಂತಾಗೆ ಬಳ್ಳಾರಿಯಲ್ಲಿ ಅವಕಾಶ ನೀಡಬಾರದು ಹಾಗೂ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಹಲವರು ಕರೆ ನೀಡಿದ್ದಾರೆ. ಇದು ಖಂಡನೀಯ. ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಇಂದಿರಾ ಗಾಂಧಿಯವರೇನು ಹೊನ್ನಪ್ಪ ಅಥವಾ ನಾಗಪ್ಪ ಗೌಡನ ಮಗಳಾಗಿದ್ದರೆ? ಈ ರಾಜ್ಯದ ಮಗಳಾಗಿದ್ದರೆ? ಎಂಬುದನ್ನು ಬಹಿರಂಗ ಪಡಿಸಲಿ ಎಂದು ತಾಕೀತು ಮಾಡಿದರು.
ಸಿದ್ದರಾಮಯ್ಯನವರು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಬಗ್ಗೆ ಏಕವಚನದಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ. ಮಹಿಳೆಯರಿಗೆ ಗೌರವ ಕೊಡದಿದ್ದರೆ ಈಗಾಗಲೇ 22 ರಾಜ್ಯಗಳಲ್ಲಿ ಮೂಲೆ ಸೇರಿರುವ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಖಾರವಾಗಿ ನುಡಿದರು.