ರಂಗೇರಿದ ಅಖಾಡದಲ್ಲಿ ಏಟು- ಎದಿರೇಟು
Team Udayavani, Oct 30, 2018, 6:00 AM IST
ಉಪಚುನಾವಣೆಗೆ ದಿನಗಣನೆ ನಡೆಯತ್ತಿರುವ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಪರಸ್ಪರ ಬಿರು ಸಿನ ವಾಗ್ಧಾಳಿಯಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ನಡುವಿನ ವಾಕ್ಸಮರ ಮುಗಿಲು ಮುಟ್ಟಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ. ಶಿವ ಕುಮಾರ್ ಮತ್ತಿತರರು ನೀಡಿರುವ ಹೇಳಿಕೆಗಳ ವಿರುದಟಛಿ ತಿರುಗಿಬಿದ್ದಿರುವ ಬಿಜೆಪಿ ನಾಯಕರು ಕಟು ಟೀಕೆ ಮುಂದುವರಿಸುವ ಮೂಲಕ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದ್ದಾರೆ.
ಸಿದ್ದು, ಡಿಕೆಶಿ ವಿರುದ್ಧ ಜನಾರ್ದನ ರೆಡ್ಡಿ ಕೆಂಡ
ಮೊಳಕಾಲ್ಮೂರು: ಹೈವೋಲ್ಟೆಜ್ ಕ್ಷೇತ್ರ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರುತ್ತಿದ್ದು, ಶ್ರೀರಾಮುಲು
ಪರಮಾಪ್ತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಖಾಡಕ್ಕಿಳಿದಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಜನಾರ್ದನ ರೆಡ್ಡಿ ಮಾತನಾಡಿದ್ದು, ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆ ಗಡಿಭಾಗದಲ್ಲಿರುವ ಹಾನಗಲ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ತಂತ್ರ-ಕುತಂತ್ರ ಮತ್ತು ಮಂತ್ರದಲ್ಲಿ ಸಿದ್ಧಹಸ್ತರು. ಈ ಎಲ್ಲ ವಿಷಯಗಳಲ್ಲಿ ಪಿಎಚ್ಡಿ ಮಾಡಿರುವುದರಿಂದ ಅವರನ್ನು ಡಾ| ಡಿ.ಕೆ. ಶಿವಕುಮಾರ್ ಎಂದು ಕರೆಯಬಹುದು ಎಂದು ವ್ಯಂಗ್ಯವಾಡಿದರು. ನನ್ನನ್ನು ಜೈಲಿನಲ್ಲಿಟ್ಟು ಆಪ್ತರ ಮೇಲೆ ದಾಳಿ ಮಾಡಿದರೂ ಒಂದು ರೂಪಾಯಿ ಕೂಡ ಸಿಕ್ಕಿಲ್ಲ. ಆದರೆ ಶಿವಕುಮಾರ್ ಅವರ ದೆಹಲಿಯ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿತು. ಈ ಪ್ರಕರಣದಿಂದ ಕಾಂಗ್ರೆಸ್ನವರು ತಲೆ ತಗ್ಗಿಸಬೇಕು. ಆದರೆ ಇವರೆಲ್ಲ ಏನೂ ಆಗಿಲ್ಲ ಎಂಬಂತೆ ತಿರುಗಾಡುತ್ತಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿ: ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಜನಾರ್ದನ ರೆಡ್ಡಿ, ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ 5 ವರ್ಷಗಳಲ್ಲಿ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಪಡಿಸದೆ ಸರ್ವನಾಶ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆಯಿಂದ ನಾನು ಹಣ ಸಂಪಾದನೆ ಮಾಡಿದ್ದೇನೆ ಎಂದು ಆರೋಪಿಸುವ ಇವರು ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಶಾಸಕರಾದ ಆನಂದ ಸಿಂಗ್ ಮತ್ತು ನಾಗೇಂದ್ರ ಅವರನ್ನು ಜತೆಯಲ್ಲಿಟ್ಟುಕೊಂಡಿದ್ದಾರೆ.
ನಿಜವಾಗಲೂ ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ ಸಿದ್ದರಾಮಯ್ಯನವರೇ ಎಂದು ವಾಗ್ಧಾಳಿ ನಡೆಸಿದರು. ನಮಗೆ ಕಾಂಗ್ರೆಸ್ ಪಕ್ಷದವರು ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಸಾಕಷ್ಟು ತೊಂದರೆ ನೀಡಿದ್ದಾರೆ. ಸತ್ಯಶೋಧನಾ ಸಮಿತಿ ರಚಿಸಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದರು. ಅಸತ್ಯವನ್ನೇ ಮಾತನಾಡುವ ವಿ.ಎಸ್. ಉಗ್ರಪ್ಪ ನೇತೃತ್ವದ ಸತ್ಯ ಶೋಧನಾ ಸಮಿತಿ ಅಂದಿನ ಮುಖ್ಯಮಂತ್ರಿಗಳಿಗೆ ಸುಳ್ಳು ವರದಿ ನೀಡಿತ್ತು ಎಂದು ಕುಟುಕಿದರು.
ಬಳ್ಳಾರಿಯಲ್ಲಿ ಹಾಲುಮತಸ್ಥರು ಮತ್ತು ವಾಲ್ಮೀಕಿ ನಾಯಕ ಸಮುದಾಯದವರು ಸಹೋದರರಂತಿದ್ದಾರೆ. ಜಾತಿಗಳನ್ನು ಮೀರಿ ಅಭಿವೃದ್ಧಿ ಪರವಾಗಿರುವವರನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ ಅವರು ಈ ಎರಡೂ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತಲು ಪ್ರಯತ್ನ ಮಾಡುತ್ತಿದ್ದಾರೆ.
● ಜನಾರ್ದನ ರೆಡ್ಡಿ, ಮಾಜಿ ಸಚಿವ
ಬೀಗತನ ಮಾಡಲು ಜೈಲಿಗೆ ಹೋಗಿದ್ರಾ?
ಇವರಿಗೆ ಕುಳಿತುಕೊಳ್ಳಲು ಚಿನ್ನದ ಕುರ್ಚಿ ಬೇಕು. ರೆಡ್ಡಿ ವಂಶಸ್ಥರೇನು ರಾಜರಾಗಿದ್ದರೇ? ಅಷ್ಟೊಂದು ವೈಭವದ ಜೀವನ ನಡೆಸಲು ಹಣ ಎಲ್ಲಿಂದ ಬಂತು? ಗಣಿ ಹಗರಣ ಮಾಡದಿದ್ದರೆ ಚಿನ್ನದ ವಸ್ತುಗಳ ನಡುವೆ ವಿಲಾಸಿ ಜೀವನ ನಡೆಸುತ್ತಿದ್ದರೆ? ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು. ರೆಡ್ಡಿ ಅಧಿಕಾರದಲ್ಲಿದ್ದಾಗ ಬಳ್ಳಾರಿಯಲ್ಲಿ ಭಯದ ವಾತಾವರಣ ಇತ್ತು. ವಿಧಾನಸಭೆಯಲ್ಲಿ ನನಗೆ “ನೀನು ಬಳ್ಳಾರಿಗೆ ಬಾ ನೋಡಿಕೊಳ್ತೀನಿ’ ಎಂದಿದ್ದ. ಬೆಂಗಳೂರಿನಿಂದಲೇ ಕಾಲ್ನಡಿಗೆಯಲ್ಲಿ ಬಂದು ಬಳ್ಳಾರಿಯಲ್ಲಿ ಸಭೆ ಮಾಡಿದೆ. ಆಗ ಬಳ್ಳಾರಿ ಜನತೆಗೆ ಸ್ವಲ್ಪ ಧೈರ್ಯ ಬಂತು ಎಂದರು.
ಜಡ್ಜ್ಗೆ ಲಂಚ ನೀಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದೇ ಶ್ರೀ ರಾಮುಲು ಸಾಧನೆಯಾಗಿದ್ದು, ಮಂತ್ರಿಯಾಗಿದ್ದಾಗ ಜಿಲ್ಲೆಯ ಜನರಿಗೆ ಉಪಯುಕ್ತವಾಗುವ ಯಾವುದೇ ಕೆಲಸ ಮಾಡಿಲ್ಲ. ಶ್ರೀರಾಮುಲು, ಜೆ.ಶಾಂತಾ ಅವರು ರಾಜ್ಯ, ರಾಷ್ಟ್ರದ ಸಮಸ್ಯೆ ಹೋಗಲಿ ಬಳ್ಳಾರಿ ಸಮಸ್ಯೆ ಬಗ್ಗೆಯಾದರೂ ಪಾರ್ಲಿಮೆಂಟ್ನಲ್ಲಿ ಧ್ವನಿ ಎತ್ತಿದ್ದಾರೆಯೇ? ಮಾತನಾಡದವರನ್ನು ಪಾರ್ಲಿಮೆಂಟ್ಗೆ ಕಳುಹಿಸಬೇಡಿ. ಸಮರ್ಥರಿರುವ ವಿ.ಎಸ್.ಉಗ್ರಪ್ಪ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಕೂಡ್ಲಿಗಿ: ಒಂದೆಡೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದರೆ ಮತ್ತೂಂದೆಡೆ ಇವರ ಆರೋಪಗಳಿಗೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನಾರ್ದನ ರೆಡ್ಡಿ ತಪ್ಪೇ ಮಾಡಿಲ್ಲವೆಂದರೆ ಜೈಲಿಗೆ ಯಾಕೆ ಹೋಗಿದ್ರು? ಬೀಗತನ, ಸಂಬಂಧ ಬೆಳೆಸಲು ಜೈಲಿಗೆ ಹೋಗಿದ್ದನೇ ಎಂದು ಲೇವಡಿ ಮಾಡಿದ್ದಾರೆ. ನಾನು ಗಣಿ ಹಗರಣ ಮಾಡಿಲ್ಲ. ಸಿದ್ದರಾಮಯ್ಯ ಅವರು ನನ್ನನ್ನು ವಿನಾಕಾರಣ ನಾಲ್ಕು ವರ್ಷ ಜೈಲಿಗೆ ಕಳುಹಿಸಿದ್ದಾರೆ ಎನ್ನುವ ರೆಡ್ಡಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ. ನಾನು ಎಲ್ಲಿ ಕರೆದರೂ ಚರ್ಚೆಗೆ ಬರಲು ಸಿದಟಛಿ ಎಂದೂ ತಿರುಗೇಟು ನೀಡಿದ್ದಾರೆ. ರೆಡ್ಡಿ ಬಳ್ಳಾರಿಗೆ ಬರುವ ಹಾಗಿಲ್ಲ, ಕೂಡ್ಲಿಗಿಗೂ ಬರುವ ಹಾಗಿಲ್ಲ. ಮೊಳಕಾಲ್ಮೂರು, ಚಿತ್ರದುರ್ಗ ಇಲ್ಲ ಬೆಂಗಳೂರಲ್ಲಿ ಇರಬಹುದೇನೋ, ಎಲ್ಲಿಯೇ ಕರೆಯಲಿ ನಾನು ಚರ್ಚೆಗೆ ಬರಲು ಸಿದ್ಧ ಎಂದರು.
ಗಣಿನಾಡು ಬಳ್ಳಾರಿ ಜಿಲ್ಲೆ, ಇಲ್ಲಿನ ಜನರನ್ನು ಏಕಾಂಗಿಗಳನ್ನಾಗಿಸಿ, ಬೇರೆ ಜಿಲ್ಲೆಗೆ ಹೋದ ಬಳಿಕ ತವರು ಜಿಲ್ಲೆಯ ಬಗ್ಗೆ ಮಾತನಾಡುವ ಹಕ್ಕು ಉಳಿಯೋದಿಲ್ಲ. ಶ್ರೀರಾಮುಲು ಏಕೆ ಜಿಲ್ಲೆ ಬಿಟ್ಟು ಏಕಾಂಗಿಯಾದರು? ಅವರನ್ನು ಏಕಾಂಗಿ ಮಾಡಿದ್ದು
ಯಾರು? ಬಳ್ಳಾರಿಯ ಗಡಿಗಿಚನ್ನಪ್ಪ ವೃತ್ತದಲ್ಲಿನ ಐತಿಹಾಸಿಕ ಗಡಿಯಾರ ಕಂಬವನ್ನು ಒಡೆದಿದ್ದು, ಬಳ್ಳಾರಿಯ ಮಕ್ಕಳೇ ಹೊರತು ಬೇರೆ ಯಾರೂ ಅಲ್ಲ. ಇಡೀ ಬಳ್ಳಾರಿಯನ್ನು ಬರಿದು ಮಾಡಿದ್ದೂ ಇವರೇ.
● ಡಿ.ಕೆ. ಶಿವ ಕುಮಾರ್, ಬಳ್ಳಾರಿ ಉಸ್ತುವಾರಿ ಸಚಿವ