ಅಧಿಕಾರಕ್ಕಾಗಿ ಯಡಿಯೂರಪ್ಪ ಮಾಡಿದ್ದೆಲ್ಲ ಗೊತ್ತು
Team Udayavani, Oct 31, 2018, 6:00 AM IST
ಕುಂದಾಪುರ/ಶಿವಮೊಗ್ಗ: ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಯಡಿಯೂರಪ್ಪ ಆರೋಪಿಸುತ್ತಾರೆ. ಒಂದು ಸಮಯದಲ್ಲಿ ಅಧಿಕಾರಕ್ಕಾಗಿ ಯಡಿಯೂರಪ್ಪ ದೇವೇಗೌಡರ ಮನೆಗೆ ಬಂದಿದ್ರು. ವಿಧಾನಸೌಧದಲ್ಲಿ 10 ನಿಮಿಷ ಮಾತಾಡಬೇಕು ಟೈಮ್ ಕೊಡಿ ಅಂತ ಚೀಟಿ ಕಳುಹಿಸಿದ್ರು. ಡಿಸಿಎಂ ಅಲ್ಲ ಸಚಿವ ಸ್ಥಾನ ಕೊಡಿ, ಬಿಜೆಪಿ ಬಿಟ್ಟು ಬರುವೆ ಅಂತ ಇವರೇ ಹೇಳಿದ್ದರು ಇದನ್ನೆಲ್ಲ ನೆನಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಟೀಕಾಪ್ರಹಾರ ನಡೆಸಿದರು. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಇಂದು ಅಥವಾ ನಾಳೆ ಸರಕಾರ ಉರುಳುತ್ತೆ ಎಂದು ಹೇಳುತ್ತಲೇ
ಬಂದಿದ್ದಾರೆ. ಈಗ ದೀಪಾವಳಿಗೆ ಸರ್ಕಾರ ಬೀಳುತ್ತದೆ ಎನ್ನಲು ಶುರು ಮಾಡಿದ್ದಾರೆ. ಇದನ್ನೆಲ್ಲ ಹೇಳಲು ಬಿಜೆಪಿಯವರು ಜ್ಯೋತಿಷಿಗಳಾ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು. ರಾಹು, ಕೇತುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಹಿಂದೆ ನಿಮ್ಮ ನಿಮ್ಮಲ್ಲಿಯೇ ಕೆಸರೆರಚಾಟ ಮಾಡಿಕೊಂಡ್ರಲ್ಲಾ ಅದು ಏನು? ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತೀನಿ ಅಂತ ಹೇಳಿದ್ದ ನಿಮಗೆ ಈಗ ಸಿದ್ದರಾಮಯ್ಯನವರ ಬಗ್ಗೆ ಅನುಕಂಪ ಬಂತಾ? ಬಿಎಸ್ವೈ ಅವರು ತಮ್ಮ ವಿರುದ್ಧದ ಹಗರಣಗಳನ್ನೆಲ್ಲ ಮುಚ್ಚಿ ಹಾಕಿಕೊಳ್ಳಲು ಏನೇನು ಮಾಡಿದ್ರು ಅನ್ನೋದು ನನಗೆ ಗೊತ್ತು. ಇವರಿಗೆ ನೈತಿಕತೆಯೇ ಇಲ್ಲ ಎಂದು ಹೇಳಿದರು. ವರ್ಗಾವಣೆ ದಂಧೆ ಬಗ್ಗೆ ನನ್ನ ವಿರುದ್ಧ ಆರೋಪ ಮಾಡ್ತಿದ್ದೀರಿ. ವರ್ಗಾವಣೆಯಲ್ಲಿ ಹಣ ಮಾಡಿದ್ದೇವೆ ಅಂತಿರಲ್ಲ. ಈಶ್ವರಪ್ಪ ಕುಟುಂಬದವರಿಗೆ ವರ್ಗಾವಣೆ ಮಾಡಿದ್ದಕ್ಕೆ ಎಷ್ಟು ಕೊಟ್ರಾ ಅಂತ ಅವರೇ ಹೇಳಬೇಕು ಎಂದರು. ವಾಲ್ಮೀಕಿ ಜಯಂತಿಗೆ ಅನಾರೋಗ್ಯದ ಕಾರಣ ಗೈರಾದೆ ಹೊರತು ಬೇರಾವ ಉದ್ದೇಶ ಇಲ್ಲ ಎಂದರು.
ಗ್ಲಿಸರಿನ್ ಹಾಕ್ಕೊಂಡು ಅಳಲ್ಲ: “ನಾನು ಭಾವನಾಜೀವಿ. ಕೆಲ ಸಂದರ್ಭದಲ್ಲಿ ಜನರ ಕಷ್ಟ ನೋಡಿ ಮನಸ್ಸಿಗೆ ನೋವಾಗುತ್ತದೆ. ಸಹಜವಾಗಿ ಕಣ್ಣೀರು ಬರುತ್ತದೆ. ಬಿಜೆಪಿಯವರು ಇದನ್ನೂ ಟೀಕಿಸುತ್ತಾರೆ. ನಾನೇನು ಕಣ್ಣಿಗೆ ಗ್ಲಿಸರಿನ್ ಹಚ್ಚಿಕೊಂಡಿಲ್ಲ. ದಿನವೂ ಅಳುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೆ ಟೀಕಿಸಿದರೆ ನಾನೇನು ಹೇಳಲಾಗದು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಪ್ರತಿಪಾದಿಸಿದ್ದಾರೆ. ಇದಕ್ಕೂ ಮೊದಲು ಕುಂದಾಪುರ ಬಳಿಯ ತ್ರಾಸಿಯಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದರು. ಹಿಂದುತ್ವದ ರಕ್ಷಣೆಯಲ್ಲಿ ಹಿಂದುವಾದ ನಾನು ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದ್ದೇನೆ. ಕರಾವಳಿಯಲ್ಲಿ ಹಿಂದುತ್ವ, ಧರ್ಮದ ಹೆಸರಿನಲ್ಲಿ ಸಂಘರ್ಷ ಹುಟ್ಟು ಹಾಕಲಾಗುತ್ತಿದೆ ಎಂದರು.