ಬಹಿರಂಗ ಪ್ರಚಾರ ಅಂತ್ಯ: ಪ್ರಚಾರದ ಕೊನೆ ಕಸರತ್ತು
Team Udayavani, Nov 2, 2018, 12:55 PM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗುವ ಐದು ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ಇನ್ನೇನಿದ್ದರೂ, ರಾಜಕೀಯ ಪಕ್ಷಗಳ ಸ್ಥಳೀಯ ನಾಯಕರು ಕೊನೆಯ ದಿನ ಕತ್ತಲ ರಾತ್ರಿಯಲ್ಲಿ ನಡೆಸುವ ಒಂದು ದಿನದ ಕಸರತ್ತು ಮಾತ್ರ ಬಾಕಿ ಉಳಿದಿದೆ.
ರಾಮನಗರ, ಜಮಖಂಡಿ ಸೇರಿ ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ, ಮಂಡ್ಯ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದರಿಂದ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಬಿಜೆಪಿ ನಿರ್ಧರಿಸಿದೆ.
ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತಾ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ನಡುವೆ ನೇರ ಪೈಪೋಟಿ ಇದೆ. ಶಿವಮೊಗ್ಗ ಕ್ಷೇತ್ರ ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯಾಗಿದ್ದು, ಪುತ್ರನನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳುವಹೊಣೆಗಾರಿಕೆ ಅವರ ಮೇಲಿದೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ಪರವಾಗಿ ಬಿಜೆಪಿನಾಯಕ ಆರ್. ಅಶೋಕ್ ಮುಂಚೂಣಿಯಲ್ಲಿ ನಿಂತು ಪ್ರಚಾರ ನಡೆಸಿದ್ದು, ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಕಾಂಗ್ರೆಸ್ಸ್ಥಳೀಯ ನಾಯಕರ ಅಸಮಾಧಾನದ ನಡುವೆಯೂ ಬಹಿರಂಗ ಪ್ರಚಾರಕ್ಕೆಅಂತ್ಯ ಹಾಡಿದ್ದಾರೆ. ಇನ್ನು ಜಮಖಂಡಿಯಲ್ಲಿಯೂ ಆನಂದ ನ್ಯಾಮಗೌಡ ಹಾಗೂ ಶ್ರೀಕಾಂತ ಕುಲಕರ್ಣಿಯನಡುವೆ ನೇರ ಹಣಾಹಣಿ ಇದ್ದು, ಇಲ್ಲಿಯೂ ಜಾತಿ ಮತ್ತು ಅನುಕಂಪದ ಆಧಾರದಲ್ಲಿಯೇ ನಾಯಕರು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಗುರುವಾರ ಬಹಿರಂಗ ಪ್ರಚಾರ ಅಂತ್ಯವಾಗಿದ್ದರಿಂದ ಎರಡೂ ಕ್ಷೇತ್ರಗಳಲ್ಲಿಯೂ ಜಾತಿ ಲೆಕ್ಕಾಚಾರವೇ ಪ್ರಮುಖ ವಿಷಯವಾಗಿಚರ್ಚಿತವಾಗುತ್ತಿದೆ.