ದನದ ಮೂಳೆ ಸುಟ್ಟು ಪುಡಿ ತಯಾರಿಕೆ
Team Udayavani, Nov 5, 2018, 6:20 AM IST
ಬೀದರ: ತಾಲೂಕಿನ ಕಂಗನಕೋಟ ಗ್ರಾಮ ಹೊರವಲಯದ ಹೊಲವೊಂದರಲ್ಲಿ ಸಾವಿರಾರು ದನಗಳ ಮೂಳೆ ಸಂಗ್ರಹಿಸಿ,
ಅವುಗಳನ್ನು ಸುಟ್ಟು ಪೌಡರ್ ತಯಾರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯ ಹಾಗೂ ನೆರೆಯ ರಾಜ್ಯಗಳಲ್ಲಿ ಕಡಿಯುವ ದನಗಳ ಮೂಳೆಗಳನ್ನು ಇಲ್ಲಿಗೆ ತರಲಾಗುತ್ತಿದ್ದು, ಹೊಲವೊಂದರಲ್ಲಿ ಅವುಗಳನ್ನು ಒಣಗಿಸಿ, ಬಳಿಕ ಸುಟ್ಟು ಪೌಡರ್ ತಯಾರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೊಲದಲ್ಲಿ ಸಾವಿರಾರು ದನದ ಮೂಳೆಗಳ ರಾಶಿ ಕಂಡುಬಂದಿದ್ದು, ಒಂದು ಕಿ.ಮೀ.ದೂರದವರೆಗೆ ದುರ್ವಾಸನೆ ಹರಡಿದೆ. ಸ್ಥಳೀಯರ ಪ್ರಕಾರ ಮೂರು ವರ್ಷಗಳಿಂದ ಈ ಅಕ್ರಮ ದಂಧೆ ನಡೆಯುತ್ತಿದ್ದು, ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿತ್ತು. ಇದೀಗ ಹೆಚ್ಚಾಗಿದೆ.ಪ್ರತಿನಿತ್ಯ ಹತ್ತಾರು ವಾಹನಗಳಲ್ಲಿ ದನಗಳ ಮೂಳೆಗಳನ್ನು ತಂದು ಸಂಗ್ರಹಿಸಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಸದ್ಯ ಈ ಅಕ್ರಮ ಘಟಕದಿಂದ ಕಂಗನ ಕೋಟ, ಮಂದಕನಳ್ಳಿ, ಸಿಕನಪೂರ್,ಶಾಮ ಶನಗರ, ಬಕ್ಕಚೌಡಿ ಸೇರಿ ಇತರೆ ನಾಲ್ಕು ಗ್ರಾಮಗಳಿಗೆ ಸಮಸ್ಯೆ ಉಂಟಾಗು ತ್ತಿದೆ. ಈ ಮಾರ್ಗವಾಗಿ ಸಂಚರಿಸುವ ವ್ಯಕ್ತಿಗಳು ವಾಂತಿ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಗ್ರಾಮಸ್ಥರ ಆರೋಗ್ಯದ ಬಗ್ಗೆ ಚಿಂತಿಸದ ವಿವಿಧ ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಈ ಅಕ್ರಮಕ್ಕೆ ಸಾಥ್ ನೀಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಕ್ರಮ ದಂಧೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹೊಲದಲ್ಲಿ ಒಂದು ಕಡೆ ದನದ ಮೂಳೆಗಳು, ಇನ್ನೊಂದು ಕಡೆ ದನದ ತಲೆಗಳ ರಾಶಿ ಹಾಕಲಾಗಿದೆ. ರಾತ್ರಿ ವೇಳೆ ಮೂಳೆಗಳನ್ನು ರಾಶಿ ಮಾಡಿ ಬೆಂಕಿ ಹಚ್ಚಿ ಬಳಿಕ ಪೌಡರ್ ತಯಾರಿಸಲಾಗುತ್ತಿದೆ. ರವಿವಾರ ಗ್ರಾಮಸ್ಥರು ಮಾಧ್ಯಮದವರೊಂದಿಗೆ ತೆರಳಿದ ಸಂದರ್ಭದಲ್ಲಿ ಅನೇಕ ಚೀಲಗಳಲ್ಲಿ ಮೂಳೆಗಳ ಪೌಡರ್ ತುಂಬಿರುವುದು ಕಂಡುಬಂದಿದ್ದು, ಗ್ರಾಮಸ್ಥರು ಸಂಬಂಧಪಟ್ಟ ಅ ಧಿಕಾರಿಗಳ
ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರ್ಷದ ಹಿಂದೆ ಅಧಿಕಾರಿಗಳಿಗೆ ದೂರು ನೀಡಿದಾಗ ಇಲ್ಲಿಂದ ದಂಧೆ ಮಾಡುವವರನ್ನುಖಾಲಿ ಮಾಡಿಸಲಾಗಿತ್ತು. ಇದೀಗ
ಮತ್ತೆ ಅದೇ ದಂಧೆ ಶುರು ಮಾಡಿದ್ದು, ಸುತ್ತಲಿನ ಪ್ರದೇಶದ ವಾತಾವರಣ ಹಾಳಾಗುತ್ತಿದೆ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುವ ಕೆಲಸ ಮಾಡಿಲ್ಲ.
– ರವಿಂದ್ರ ಶಂಭು, ಗ್ರಾಪಂ ಸದಸ್ಯ
ತೆಲಂಗಾಣದ ಜಹೀರಾಬಾದ್ ಸಮೀಪದ ಕಸಾಯಿಖಾನೆಯಿಂದ ದನಗಳ ಮೂಳೆಗಳನ್ನು ಕಂಗನಕೋಟ್ ಗ್ರಾಮಕ್ಕೆ ತಂದು ಡಂಪ್ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಸೂಕ್ತ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಸೂಚಿಸಲಾಗಿದೆ.
– ಟಿ.ಶ್ರೀಧರ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ