ಸಕಲೇಶಪುರ ನಗರಸಭೆ ಅಧಿಕಾರಿಗೆ “ಸುಪ್ರೀಂ’ ನೋಟಿಸ್
Team Udayavani, Nov 18, 2018, 6:15 AM IST
ನವದೆಹಲಿ: ನಿಯಮಗಳನ್ನು ಮೀರಿ ಬೀದಿ ನಾಯಿಗಳನ್ನು ಕೊಂದ ಆರೋಪ ಹೊತ್ತಿರುವ ಕರ್ನಾಟಕದ ಸಕಲೇಶಪುರ ನಗರಸಭೆಯ ಆಡಳಿತಾಧಿಕಾರಿ ವಿ.ಟಿ. ವಿಲ್ಸನ್ ಹಾಗೂ ಗುತ್ತಿಗೆದಾರ ವಿ. ಜಾರ್ಜ್ ರಾಬರ್ಟ್ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗಾಗಿ ಸ್ವೀಕರಿಸಿದ್ದು, ಆರೋಪಗಳಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಈ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿದೆ.
ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ನೆವಿನಾ ಕಾಮತ್ ಎಂಬುವರ ಪರವಾಗಿ ಅವರ ವಕೀಲರಾದ ಸಿದ್ದಾರ್ಥ್ ಗಾರ್ಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಹಾಗೂ ಎಂ.ಎಂ. ಶಾಂತನಗೌಡರ್ ಅವರುಳ್ಳ ನ್ಯಾಯಪೀಠ ಸ್ವೀಕರಿಸಿ ಈ ನೋಟಿಸ್ ನೀಡಿದೆ.
2015ರ ನ. 18ರಂದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ ಹಾಗೂ ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳನ್ನು ಬೀದಿ ನಾಯಿಗಳ ವಿಚಾರದಲ್ಲೂ ಪಾಲಿಸುವಂತೆ ದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆದರೆ, ಸಕಲೇಶಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣದ ಗುತ್ತಿಗೆ ಪಡೆದಿರುವ ಜಾರ್ಜ್ ಈ ನಿಯಮ ಸರಿಯಾಗಿ ಪಾಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.