ಕೇಂದ್ರದ ವಿರುದ್ಧ ದೆಹಲಿ ಚಲೋ ನಡೆಯಲಿ
Team Udayavani, Nov 18, 2018, 6:25 AM IST
ಬೆಂಗಳೂರು : ಸಹಕಾರಿ ಬ್ಯಾಂಕ್ಗಳ ಕುರಿತು ಕೇಂದ್ರ ಸರ್ಕಾರ ಹೊಂದಿರುವ ವಿರೋಧಿ ಧೋರಣೆ ಖಂಡಿಸಿ ದೆಹಲಿ ಚಲೋ ಹಮ್ಮಿಕೊಳ್ಳುವಂತಾಗಬೇಕು ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸಹಕಾರಿ ಮಹಾಮಂಡಳಿ, ಸಹಕಾರಿ ಪಟ್ಟಣ ಬ್ಯಾಂಕ್ಗಳ ಮಹಾಮಂಡಳಿ ಸಹಿತವಾಗಿ ವಿವಿಧ ಸಹಕಾರಿ ಸಂಸ್ಥೆಗಳು ಶನಿವಾರ ನಗರದ ಶಿಕ್ಷಕರ ಸದನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 65ನೇ ಅಖೀಲ ಭಾರತ ಸಹಕಾರಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರ ಸರ್ಕಾರದ ಪರ್ಯಾಯ ಆರ್ಥಿ ವ್ಯವಸ್ಥೆಯಂತೆ ಸೇವೆ ಸಲ್ಲಿಸುತ್ತಿವೆ. ಸಹಕಾರಿ ಬ್ಯಾಂಕ್ಗಳು ಗಳಿಸಿದ ಲಾಭಾಂಶದಲ್ಲಿ ಶೇ.33ರಷ್ಟು ತೆರಿಗೆ ಪಾವತಿಸಬೇಕು ಎಂಬ ಕೇಂದ್ರ ನಿಯಮ ಸರಿಯಲ್ಲ. ಇದರ ವಿರುದ್ಧ ಸಹಕಾರಿ ಸಂಸ್ಥೆಗಳು ಒಟ್ಟಾಗಿ ಬೃಹತ್ ಆಂದೋಲನ ಹಮ್ಮಿಕೊಳ್ಳಬೇಕು. ಕೇಂದ್ರ ಸರ್ಕಾರವನ್ನು ಎಚ್ಚರಿಸಲು ದೆಹಲಿ ಚಲೋನಂತಹ ಕಾರ್ಯಕ್ರಮ ಅಗತ್ಯ ಎಂದು ಹೇಳಿದರು.
ಸಹಕಾರ ಕ್ಷೇತ್ರ ಜನರ ಸಹಭಾಗಿತ್ವದಲ್ಲಿ ನಡೆಬೇಕು. ಇದರ ಬೆಳವಣಿಗೆಗೆ ಎಲ್ಲರ ಸಹಕಾರವೂ ಅಗತ್ಯ. ದೇಶದ ಸಹಕಾರಿ ವ್ಯವಸ್ಥೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಅದರ ನಂತರ ಸ್ಥಾನ ಕರ್ನಾಟಕದ್ದಾಗಿದೆ. ನಮ್ಮಲ್ಲಿ ಸಹಕಾರಿ ವ್ಯವಸ್ಥೆ ಸದೃಢವಾಗಿದೆ. 306 ಪಟ್ಟಣ ಸಹಕಾರಿ ಬ್ಯಾಂಕ್ನಲ್ಲಿ 31 ಸಾವಿರ ಕೋಟಿ ಠೇವಣಿ ಹಾಗೂ 18 ಸಾವಿರ ಕೋಟಿಗೂ ಅಧಿಕ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಅಪೆಕ್ಸ್, ಡಿಸಿಸಿ ಮೊದಲಾದ ಸಹಕಾರಿ ಬ್ಯಾಂಕ್ಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಠೇವಣಿ ಇಡುವ ಮಾದರಿಯಲ್ಲಿ ಸದೃಢ ಮತ್ತು ವ್ಯವಸ್ಥೆ ಚೆನ್ನಾಗಿರುವ ಸಹಕಾರಿ ಬ್ಯಾಂಕ್ನಲ್ಲೂ ಠೇವಣಿ ಇಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಸಹಕಾರಿ ಬ್ಯಾಂಕ್ಗಳು ಹಳ್ಳಿಗಳಲ್ಲಿ ಸಾಲದ ವ್ಯಾಪ್ತಿ ಇನ್ನಷ್ಟು ಹೆಚ್ಚಿಸಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಅನೇಕರಿಗೆ ಅನುಕೂಲವಾಗಲಿದೆ ಎಂದರು.
ಸಹಕಾರಿ ಸಂಸ್ಥೆಗಳ ಸಮಸ್ಯೆಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ನಿಮ್ಮೆಲ್ಲರ ಸಮಸ್ಯೆಗಳನ್ನು ಪ್ರಸ್ತಾವನೆ ರೂಪದಲ್ಲಿ ನೀಡಬೇಕು. ತೆಂಗಿನ ನಾರು ಮಹಾಮಂಡಳಿಯ ಪುನಶ್ಚೇತನಕ್ಕೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ. ಸಹಕಾರಿ ಸಂಸ್ಥೆಗಳು ನಡೆಸುತ್ತಿದ್ದ 37 ಸಕ್ಕರೆ ಕಾರ್ಖಾನೆಗಳಲ್ಲಿ 7 ಮಾತ್ರ ಚೆನ್ನಾಗಿ ನಡೆಯುತ್ತಿದೆ. ಮಹಾರಾಷ್ಟ್ರದ ಮಾದರಲ್ಲಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಖಾಸಗಿಯವರು ಟೆಂಡರ್ ಮೂಲಕ ಖರೀದಿಸಿ ಸಕ್ಕರೆ ಕಾರ್ಖಾನೆಗಳನ್ನು ಚೆನ್ನಾಗಿ ನಡೆಸುತ್ತಾರೆ ಸಹಕಾರಿ ಅಥವಾ ಸರ್ಕಾರಿ ವ್ಯವಸ್ಥೆ ಇದು ಏಕೆ ಸಾಧ್ಯವಾಗುತ್ತಿಲ್ಲ. ಸಹಕಾರಿ ಕ್ಷೇತ್ರ ಮುನ್ನೆಡೆಸಲು ಅಧಿಕಾರಿಗಳು ಶ್ರಮ ವಹಿಸಬೇಕು. ಹಿನ್ನೆಲೆಯಲ್ಲಿ ಬೀದರ್ನಲ್ಲಿ ದೊಡ್ಡ ಗಾರ್ಮೆಂಟ್ ತೆರೆಯಲು ಯೋಚನೆ ಮಾಡಿದ್ದೇವೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಮಾತನಾಡಿ, ಖಾಸಗಿ ಬ್ಯಾಂಕ್ಗಳು ಅನುತ್ಪಾದಕ ಆಸ್ತಿ ಮೌಲ್ಯ 2014ರ ವೇಳೆಗೆ 2.50 ಲಕ್ಷ ಕೋಟಿ ಇದ್ದಿತ್ತು. ಈಗ ಅದು 10 ಲಕ್ಷ ಕೋಟಿಗೆ ಏರಿದೆ. ಅಂತಹ ಖಾಸಗಿ ಬ್ಯಾಂಕ್ಗಳ ಹೆಸರನ್ನು ಬಹಿರಂಗ ಪಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ವ್ಯವಸ್ಥೆ ಮೇಲೆ ಬಲಪ್ರಯೋಗ ಮಾಡುವುದು ಸರಿಯಲ್ಲ ಎಂದರು.
ಖಾಸಗಿಯವರಿಗೆ ಒಂದು ನೀತಿ, ಸರ್ಕಾರದ ಬ್ಯಾಂಕ್ಗಳಿಗೆ ಇನ್ನೊಂದು ನೀತಿ ಹಾಗೂ ಸಹಕಾರಿ ಬ್ಯಾಂಕ್ಗೆಳಿಗೆ ಮತ್ತೂಂದು ನೀತಿ ಹೀಗೆ ಎಲ್ಲ ವಲಯಕ್ಕೂ ವಿಭಿನ್ನ ನಿಯಮ ಅನುಸರಿಸುತ್ತಿರುವುದು ಸರಿಯಲ್ಲ. ಸರ್ಕಾರವು ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದಂತೆ ಖಾಸಗಿ ಕ್ಷೇತ್ರದ ಮೇಲೂ ಹಿಡಿತ ಸಾಧಿಸಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ರವಿ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ರಾಜ್ಯ ಸಹಕಾರಿ ಮಹಾಮಂಡಳಿ ಅಧ್ಯಕ್ಷ ಎನ್.ಗಂಗಣ್ಣ, ಸಹಕಾರಿ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ