ಬಿ.ಟೀಂ ಆರೋಪಕ್ಕೆ ಬೇಸರ
Team Udayavani, Jan 14, 2019, 12:30 AM IST
ಹಾಸನ: ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಕಾಂಗ್ರೆಸ್ ಮಾಡಿದ್ದ ಆರೋಪದ ನೋವು ನನಗೆ ಇನ್ನೂ ಕಡಿಮೆಯಾಗಿಲ್ಲ…
ಇದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದ ಬೇಸರದ ಮಾತು. ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಜೆಡಿಎಸ್ ಜಾತ್ಯತೀತ ತತ್ವವನ್ನು ಪ್ರತಿಪಾದಿಸಿಕೊಂಡು ಬಂದಿದೆ. ಆದರೂ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಅಪವಾದ ಹೊರಿಸಲಾಯಿತು. ಈ ಮಾತನ್ನು ರಾಹುಲ್ಗಾಂಧಿ ಹೇಳಬೇಕೆಂದೇನೂ ಇರಲಿಲ್ಲ. ಅವರಿಗೆ ಯಾರೋ ಚೀಟಿಕೊಟ್ಟು ಹೇಳಿಸಿದ್ದಾರೆ. ಅದೆಲ್ಲಾ ನಮಗೆ ಗೊತ್ತಿದೆ ಎಂದು ಯಾರ ಹೆಸರೇಳದೇ ಕಿಡಿಕಾರಿದರು.
ಅಧಿಕಾರಕ್ಕಾಗಿ ನಾವು ಏನು ಬೇಕಾದರೂ ಮಾಡುತ್ತೇವೆ ಎಂಬ ಭಾವನೆ ಅಲ್ಪ ಸಂಖ್ಯಾತರಲ್ಲಿ ಬರುವುದು ಬೇಡ. ನಾವು ಅಲ್ಪಸಂಖ್ಯಾತರಿಗಾಗಿ ಏನೇನು ಮಾಡಿದ್ದೇವೆ. ನಮ್ಮ ನಿಲುವೇನು ಎಂಬುದನ್ನು ಜ.17 ರಂದು ನಡೆಯಲಿರುವ ಮುಸಲ್ಮಾನರ ಸಮಾವೇಶದಲ್ಲಿ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಸಿಎಂ ಎಚ್ಡಿಕೆಗೆ ನೋವಿದೆ:
ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೋವಿದೆ. ಕಾಂಗ್ರೆಸ್ 78 ಶಾಸಕರನ್ನು ನಿಭಾಯಿಸಿಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳನ್ನೂ ಮುಂದುವರಿಸಿಕೊಂಡು ರೈತರ 48 ಸಾವಿರ ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಿ ಸರ್ಕಾರ ನಡೆಸುವುದು ಸುಲಭದ ಮಾತಲ್ಲ ಎಂದು ಸಮರ್ಥಿಸಿಕೊಂಡರು.
ಸಾಂದರ್ಭಿಕವಾಗಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟ ಎಂದು ಹೇಳಿರಬಹುದು. ಅದಕ್ಕೆ ಪ್ರಧಾನಿಯವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯ ನೋವಿನ ಬಗ್ಗೆ ಮುಖ್ಯಮಂತ್ರಿ ಕಾಂಗ್ರೆಸ್ನ ಕ್ಲರ್ಕ್ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಾಖ್ಯಾನ ಮಾಡಬೇಕಾಗಿಲಿಲ್ಲ ಎಂದು ನರೇಂದ್ರಮೋದಿಯವರಿಗೆ ತಿರುಗೇಟು ನೀಡಿದದರು.
ಕಾಂಗ್ರೆಸ್ ಜತೆಗೇ ಮೈತ್ರಿ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಆಗಲಿದೆ. ಆದರೆ ಸೀಟು ಹಂಚಿಕೆಯ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು. ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವಾಗಲು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.