“ಬೇಡ ಅಂದ್ರೂ ಸಿದ್ದರಾಮಯ್ಯ ಅಬಕಾರಿ ಖಾತೆ ಕೊಟ್ಟಿದ್ರು’
Team Udayavani, Nov 22, 2018, 6:20 AM IST
ಬೆಳಗಾವಿ: “ನನಗೆ ಇಷ್ಟ ಇಲ್ಲದಿದ್ದರೂ ಸಿದ್ದರಾಮಯ್ಯ ಅವರು ಒತ್ತಾಯ ಪೂರ್ವಕವಾಗಿ ನನಗೆ ಅಬಕಾರಿ ಖಾತೆ ಕೊಟ್ಟರು. ಹೀಗಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬರಬೇಕಾಯಿತು’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ “ಪೀಪಲ್ಸ್ ಚಾಣಕ್ಯ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಅಂತಹ ಖಾತೆ ನನಗೆ ಇಷ್ಟ ಇರಲಿಲ್ಲ. ನಮಗೆ ಒಳ್ಳೆಯದಾಗುತ್ತೆ ಅಂತ ಸಿದ್ದರಾಮಯ್ಯ ಅಬಕಾರಿ ಖಾತೆ ಕೊಟ್ಟರು. ಆದರೆ, ನಾವು ಕಷ್ಟಪಟ್ಟು ದುಡಿದು ಮಾಡಿರುವ ಆಸ್ತಿಯನ್ನು ಅಬಕಾರಿಯಿಂದ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದವು. ಅದಕ್ಕೆ 2-3 ಸಲ ರಾಜೀನಾಮೆ ಕೊಟ್ಟೆ. ಅಬಕಾರಿ ಖಾತೆ ನಿಭಾಯಿಸುವಲ್ಲಿ ಕೋಟ್ಯಂತರ ರೂ.ಅವ್ಯವಹಾರ ಆಗಿದೆ ಎಂದು ಕೆಲವರು ಆರೋಪ ಮಾಡಿದರು. ಕಷ್ಟಪಟ್ಟು ದುಡಿದು ಗಳಿಸಿರುವ ಆಸ್ತಿಯೇ ಸಾಕಷ್ಟಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಆರೋಪ ಬಂತು. ಹೀಗಾಗಿ, ಆ ಖಾತೆ ಬಿಟ್ಟೆ’ ಎಂದರು.
ಕಾರು ಚೇಂಜ್ ಮಾಡಲ್ಲ: “ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ಗಿಂತಲೂ ಮೊದಲು ನಾನು ಖಾಸಗಿ ವಾಹನವನ್ನೇ ಬಳಸುತ್ತಿದ್ದೇನೆ. ಆದರೆ, ನಮಗೆ ಪ್ರಚಾರ ಸಿಗಲಿಲ್ಲ. ನಾನು ಸಂಚರಿಸುವ ಕಾರನ್ನು ಬದಲಾಯಿಸುವಂತೆ ಹೆಂಡತಿ-ಮಕ್ಕಳು ಸೇರಿದಂತೆ ಅನೇಕರು ಗಂಟು ಬಿದ್ದಿದ್ದಾರೆ. 3 ಲಕ್ಷ ಕಿ.ಮೀ. ಸಂಚರಿಸಿರುವ ಕಾರನ್ನು 5 ಲಕ್ಷ ಕಿ.ಮೀ.ವರೆಗೂ ಓಡಿಸುತ್ತೇನೆ. ಅಲ್ಲಿಯವರೆಗೆ ಕಾರನ್ನು ಚೇಂಜ್ ಮಾಡೋದಿಲ್ಲ. ಯಾವ ಗಾಡಿಯಲ್ಲಿ ಕುಳಿತರೂ ನಾವು ಜನರಿಗೆ ಕಾಣಿಸುತ್ತೇವೆ’ ಎಂದರು.