ಸಿಎಂ ಕೆಂಡಾಮಂಡಲ: ಯಾವ ಕಾರಣಕ್ಕೂ ಪ್ರೆಸ್ ಸ್ಟೇಟ್ಮೆಂಟ್ ಇಲ್ಲ !
Team Udayavani, Nov 22, 2018, 2:31 PM IST
ಬೆಂಗಳೂರು: ತನ್ನ ವಿರುದ್ಧದ ನಿರಂತರ ಟೀಕೆಗಳಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಕೆಂಡಾಮಂಡಲವಾಗಿ ಇನ್ನು ಮುಂದೆ ಮಾಧ್ಯಮಗಳಿಗೆ ಹೇಳಿಕೆ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.
‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಿ, ಬೀದಿಬದಿ ವ್ಯಾಪಾರಿಗಳಿಗೆ ಚೆಕ್ ವಿತರಿಸಿ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ತೀವ್ರ ಆಕ್ರೋಶ ಹೊರಹಾಕಿದರು.
ಇತ್ತೀಚಿಗಿನ ದಿನಗಳಲ್ಲಿ ನಾನು ಏನು ಮಾತನಾಡಿದರೂ ತಪ್ಪು ತಿಳಿದುಕೊಳ್ಳುತ್ತಾರೆ. ಯಾವ ರೀತಿ ಮಾತನಾಡಬೇಕು ಎನ್ನುವ ಕುರಿತು ಕಮಿಟಿ ರಚನೆ ಮಾಡಿ ಮುಖ್ಯಮಂತ್ರಿಗಳು ಹೇಗೆ ಮಾತನಾಡಬೇಕು ಎಂದು ಅವರು ಕೊಟ್ಟ ಸಲಹೆಗಳನ್ನು ಕೇಳಿ ಮಾತನಾಡಬೇಕೊ ಎನೋ, ನನಗೆ ಗೊತ್ತಿಲ್ಲ ಎಂದರು.
ಇನ್ಮುಂದೆ ನಾನು ಯಾವುದೇ ಕಾರಣಕ್ಕೆ ಪ್ರೆಸ್ಸ್ಟೇಟ್ಮೆಂಟ್ ಕೊಡುವುದಿಲ್ಲ. ಸಮಾರಂಭಗಳ ವೇದಿಕೆಯಲ್ಲಿ ಮಾತ್ರ ಮಾತನಾಡುತ್ತೇನೆ. ಬೇಕಾದ್ರೆ ಬರ್ಕಳ್ಳಿ ಎಂದು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.
ಯಡಿಯೂರಪ್ಪನವರು ಹೇಳ್ತಾರೆ , ಸಾಲಮನ್ನಾ ಮನ್ನಾ ಯೋಜನೆ ಬುರುಡೆ ಅಂತಾ 45 ಸಾವಿರ ರೈತರ ಸಾಲಮನ್ನಾ ವಿಚಾರದಲ್ಲಿ ಬರುಡೆ ಬಿಡ್ಲಿಕ್ಕೆ ಆಗುತ್ತದಾ? ನಾನು ಜನರ ಎದುರು ಹೋಗಬೇಕು. ಸರ್ಕಾರ ಅಂತೀರಾ ನಿಮ್ಮಿಂದ ನಾವು ಕಲಿಯಬೇಕಾ ?
ನಾನೇನು ಪಲಾಯನ ಮಾಡುವುದಿಲ್ಲ, ಬನ್ನಿ ಬೆಳಗಾವಿ ಅಧಿವೇಶನಲ್ಲಿ ಚರ್ಚೆ ಮಾಡುವ ಎಂದು ಸವಾಲೆಸೆದರು.
ಯಡಿಯೂರಪ್ಪನವರು ಬೆಳಗಾವಿಯಲ್ಲಿ 1 ಲಕ್ಷ ಜನರನ್ನು ಸೇರಿಸುತ್ತಾರಂತೆ, ನಮಗೂ ನಿಮ್ಮನ್ನು ಎದುರಿಸುವ ಶಕ್ತಿ ಇದೆ ಎಂದರು.
ಸಿಎಂ ಸ್ಥಾನ ಏನು ನನಗೆ ಶಾಶ್ವತವ. ಅವರೆಲ್ಲಾ ಅಧಿಕಾರ ನಡೆಸಬೇಕು ಎಂದು ಕಾಂಗ್ರೆಸ್ನವರು ಬೆಂಬಲ ಕೊಟ್ಟಿದ್ದಾರೆ. ಅವರ ವಿಶ್ವಾಸ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಇರುತ್ತೇನೆ. ದೇವರು ಹಣೆಯಲ್ಲಿ ಬರೆದಿರುವ ವರೆಗೆ ಕೆಲಸ ಮಾಡುತ್ತೇನೆ.