ಅಮರ ಯಾತ್ರೆಯ ನಡುವೆ ಭಾವುಕ ವಿದಾಯ


Team Udayavani, Nov 27, 2018, 6:25 AM IST

ban27111805medn.jpg

ಬೆಂಗಳೂರು: ಅಗಲಿದ ನೆಚ್ಚಿನ ನಟನಿಗೆ ಭಾವಪೂರ್ಣ ವಿದಾಯ ಹೇಳಲು ಸಾಗರೋಪಾದಿಯಲ್ಲಿ ಹರಿದು ಬಂದ ಅಭಿಮಾನಿ ಬಳಗ. ರಸ್ತೆಯುದ್ದಕ್ಕೂ ಪುಷ್ಪವೃಷ್ಠಿ ನಡೆಸಿ ನಮನ ಸಲ್ಲಿಸಿದ ಸಾರ್ವಜನಿಕರು. ಶೋಕ ಸಾಗರದಲ್ಲಿ ಕಣ್ಣೀರ ಹೊಳೆಯಲ್ಲಿ ಮೂರೂವರೆ ತಾಸು ಸಾಗಿದ ಅಂತಿಮ ಯಾತ್ರೆ. ನಿರಂತರವಾಗಿ ಮೊಳಗಿದ ಸಾಲು “ಮತ್ತೆ ಹುಟ್ಟಿ ಬಾ ಅಣ್ಣಾ…’ಘೋಷಣೆ.

ನಟ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತಿಮ ಯಾತ್ರೆಯಲ್ಲಿ ಕಣ್ಣಾಯಿಸಿದಷ್ಟು ದೂರ ಜನ, ಜನ, ಜನ. ದುಃಖತಪ್ತ ವಾತಾವರಣದಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಾ ಅಭಿಮಾನಿಗಳು, ಬೆಂಬಲಿಗರು, ಆಪ್ತರು ಅಂತಿಮ ಯಾತ್ರೆಗೆ ಸಾಕ್ಷಿಯಾದರು.

ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ ನಡೆದೇ ಸಾಗಿದ ಅಭಿಮಾನಿಗಳು ಅಂಬರೀಶ್‌ ಪರ ಜೈಕಾರ ಕೂಗಿದರು. ಮೆರವಣಿಗೆ ಮಾರ್ಗ ಮಧ್ಯೆ ಕೆಲವು ವಾಣಿಜ್ಯ ಮಳಿಗೆಗಳು ಹಾಗೂ ಜಂಕ್ಷನ್‌ಗಳಲ್ಲಿ ಅಂಬರೀಶ್‌ ಅವರಿಗೆ ನಮನ ಸಲ್ಲಿಸಲಾಯಿತು. ಕೆಲ ಅಭಿಮಾನಿಗಳು ಅಂಬಿ ಅವರ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಅಂತಿಮ ನಮನ ಸಲ್ಲಿಸಿದರು.

ಸೋಮವಾರ ಬೆಳಗ್ಗೆ 11.20ಕ್ಕೆ ಮಂಡ್ಯದಿಂದ ಸೇನೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಕಂಠೀರವ ಕ್ರೀಡಾಂಗಣಕ್ಕೆ ಜೀರೋ ಟ್ರಾಫಿಕ್‌ ವ್ಯವಸ್ಥೆಯಲ್ಲಿ 11.50 ಹೊತ್ತಿಗೆ ಆ್ಯಂಬುಲೆನ್ಸ್‌ನಲ್ಲಿ ರವಾನಿಸಲಾಯಿತು. ಈ ವೇಳೆ ಅಂಬರೀಶ್‌ ಅವರ ದರ್ಶನ ಪಡೆಯಲು ಸಿನಿತಾರೆಯರು ಮುಗಿಬಿದ್ದರು. ಜತೆಗೆ ಕ್ರೀಡಾಂಗಣದ ಹೊರ ರಸ್ತೆಗಳ ಎರಡೂ ಕಡೆಗಳಲ್ಲಿ ನಿಂತಿದ್ದ ಅಭಿಮಾನಿಗಳು ಕಣ್ಣೀರಿಡುತ್ತಾ ಘೋಷಣೆ ಕೂಗಿದರು. ಈ ವೇಳೆ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಕಂಠೀರವ ಕ್ರೀಡಾಂಗಣಕ್ಕೆ ಬಂದ ನಂತರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್‌ನಿಂದ ಹೂವುಗಳಿಂದ ಅಲಂಕರಿಸಿದ್ದ ಗಾಜಿನ ಹೊರಮೈಯಿರುವ ವಿಶೇಷ ವಾಹನದಲ್ಲಿ ಇರಿಸಲಾಯಿತು. ಅಂಬರೀಶ್‌ ಅವರ ಕುಟುಂಬದವರು ವಾಹನಕ್ಕೆ ಪೂಜೆ ಸಲ್ಲಿಸದ ಬಳಿಕ 12.30ಕ್ಕೆ ಮೆರವಣಿಗೆ ಆರಂಭವಾಯಿತು. ವಾಹನ ಕ್ರೀಡಾಂಗಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಕಣ್ಣೀರು ಹಾಕುತ್ತಲೇ ಘೋಷಣೆ ಕೂಗಲಾರಂಭಿಸಿದರು.

ಜೀರೋ ಟ್ರಾಫಿಕ್‌ನಲ್ಲೇ ಸಾಗಿದ ಮಾರ್ಗದಲ್ಲಿ ಹಡ್ಸನ್‌ ವೃತ್ತ, ಕೆ.ಜಿ.ರಸ್ತೆ ಹಾಗೂ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಅಂಬರೀಶ್‌ ಅವರ ಅಂತಿಮ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಪಾರ್ಥಿವ ಶರೀರವಿದ್ದ ವಾಹನವು ಕೆ.ಜಿ.ರಸ್ತೆ ಪ್ರವೇಶಿಸುತ್ತಿದ್ದಂತೆ ನೂರಾರು ಅಭಿಮಾನಿಗಳು ಪುಷ್ಪವೃಷ್ಠಿ ಮಾಡಿ ಕಂಬನಿ ಮೀಡಿದರು.

ಯಾತ್ರೆ ಸಾಗಿದಂತೆಲ್ಲಾ ಜನರ ಸಾಲು ಬೆಳೆಯುತ್ತಲೇ ಹೋಯಿತು. ಸುದೀರ್ಘ‌ ಮೂರೂವರೆ ಗಂಟೆಗಳ ಕಾಲ ಸಾಗಿದ ಮೆರವಣಿಗೆಯಲ್ಲಿ ಲಕ್ಷಾಂತರ ಅಭಿಮಾನಿಗಳು ಕೊನೆಯ ಬಾರಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ಅಲ್ಲಲ್ಲಿ ಅಭಿಮಾನಿಗಳು ನಿಂತು ಜೈಕಾರ ಹಾಕುತ್ತಿದ್ದರಿಂದ ಪಾರ್ಥಿವ ಶರೀರವಿದ್ದ ವಾಹನದ ಕಡೆಗೆ ಅಭಿಮಾನಿಗಳು ಮುನ್ನುಗ್ಗಲು ಪ್ರಯತ್ನಿಸಿದಾಗ, ಪೊಲೀಸರು ನಿಯಂತ್ರಿಸಿದರು.

ಮಾರ್ಗ ಮಧ್ಯೆಯಲ್ಲಿ ಅಂಬರೀಶ್‌ ಅವರು ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಕೆಲ ಸ್ಥಳಗಳಲ್ಲಿ ಪಾರ್ಥಿವ ಶರೀರವಿದ್ದ ವಾಹನವನ್ನು ಸ್ವಲ್ಪ ಸಮಯದ ನಿಲ್ಲಿಸಲಾಯಿತು. ಅಂಬರೀಶ್‌ ಅವರು ಹೆಚ್ಚಿನ ಸಮಯ ಕಳೆಯುತ್ತಿದ್ದಂತಹ ಬೆಂಗಳೂರು ಗಾಲ್ಫ್ ಕ್ಲಬ್‌ ಹಾಗೂ ತಾತಾ ಪಿಟೀಲು ಚೌಡಯ್ಯ ಅವರ ಸ್ಮರಣಾರ್ಥ ಟಿ.ಚೌಡಯ್ಯ ಸ್ಮಾರಕ ಸಭಾಂಗಣದ ಬಳಿ ವಾಹನ ಕೆಲಕಾಲ ನಿಲ್ಲಿಸಿ ಗೌರವ ಸೂಚಿಸಲಾಯಿತು.

ಸ್ಯಾಂಕಿರಸ್ತೆ, ಮಾರಮ್ಮ ಸರ್ಕಲ್‌, ಯಶವಂತಪುರ ಮೇಲ್ಸೇತುವೆ, ಗೋವರ್ಧನ್‌ ಚಿತ್ರಮಂದಿರ, ಗೊರಗುಂಟೆ ಪಾಳ್ಯ ಮಾರ್ಗವಾಗಿ ಸಾಗಿ ಬಂದ ಮೆರವಣಿಗೆ ಸಂಜೆ 4 ಗಂಟೆ ವೇಳೆಗೆ ಕಂಠೀರವ ಸ್ಟುಡಿಯೋ ತಲುಪಿತು. ಆ ವೇಳೆಗಾಗಲೇ ಸ್ಟುಡಿಯೋ ಆವರಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರಿಂದ ಕಂಠೀರವ ನಗರದ ಬಳಿಯ ಮೇಲ್ಸೇತುವೆ ಜನರಿಂದಲೇ ಭರ್ತಿಯಾಗಿತ್ತು.

ಸ್ಟುಡಿಯೋ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಭಿಮಾನಿಗಳು ಆಗ್ರಹಿಸಿದಾಗ ಕೆಲಕ್ಷಣ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಸ್ಟುಡಿಯೋ ಪ್ರವೇಶಿಸಲು ಮುಂದಾದಾಗ ಪೊಲೀಸರು, 15 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಒಳಗಿರುವುದರಿಂದ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ ಹೊರಭಾಗದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಅಲ್ಲಿಯೇ ವೀಕ್ಷಿಸುವಂತೆ ಎಂದು ಸಮಾಧಾನಪಡಿಸಿದರು.

ಲಘು ಲಾಠಿ ಪ್ರಹಾರ
ಪಾರ್ಥಿವ ಶರೀರ ಹೊತ್ತ ವಾಹನ ಗೊರಗುಂಟೆ ಪಾಳ್ಯ ತಲುಪುತ್ತಿದ್ದಂತೆ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದರಿಂದ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು. ನೂರಾರು ಅಭಿಮಾನಿಗಳು ಅಣ್ಣನನ್ನು ನೋಡಲೇಬೇಕೆಂದು ವಾಹನದ ಕಡೆಗೆ ನುಗ್ಗಲು ಯತ್ನಿಸಿದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ಅರ್ಥ ಮಾಡಿಕೊಳ್ಳದಿದ್ದಾಗ ಲಘು ಲಾಠ ಪ್ರಹಾರ ನಡೆಸಿದರು.

ಅಂಗಡಿ ಮುಂಗಟ್ಟು ಬಂದ್‌
ಅಂಬರೀಶ್‌ ಅವರ ಅಂತಿಮ ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಮಳಿಗೆದಾರರು ಸ್ವಯಂಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್‌ ಮಾಡಿ ಗೌರವ ಸಲ್ಲಿಸಿದರು. ಕಾವೇರಿ ಚಿತ್ರಮಂದಿರ ಬಳಿಯ ಕಾರ್‌ ಶೋ ರೂಂನಿಂದ ಹಿಡಿದು ವೈಯಾಲಿಕಾವಲ್‌, ಮಲ್ಲೇಶ್ವರ 18ನೇ ಮುಖ್ಯ ರಸ್ತೆ ಸುತ್ತಮುತ್ತ, ಸ್ಯಾಂಕಿ ರಸ್ತೆ, ಯಶವಂತಪುರ ರಸ್ತೆ, ಗೋವರ್ಧನ ಚಿತ್ರಮಂದಿರ ಸೇರಿದಂತೆ ಮಾರ್ಗದುದ್ದಕ್ಕೂ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಿದ್ದವು. ಸ್ವಯಂ ಘೋಷಿತ ಬಂದ್‌ ವಾತಾವರಣ ಕಂಡುಬಂತು. ವಾಣಿಜ್ಯ ಮಳಿಗೆಗಳು, ಅಪಾರ್ಟ್‌ಮೆಂಟ್‌ ಹಾಗೂ ಕೆಲ ಮನೆಗಳ ಮುಂಭಾಗದಲ್ಲಿ ಸ್ಥಳೀಯರು ಅಂಬರೀಶ್‌ ಅವರ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರು.

ಪೆಟ್ರೋಲ್‌ ಬಂಕ್‌ಗಳು ಬಂದ್‌
ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾರ್ಗಮಧ್ಯದ ಎಲ್ಲ ಪೆಟ್ರೋಲ್‌ ಬಂಕ್‌ಗಳನ್ನು ಬಂದ್‌ ಮಾಡಲಾಯಿತ್ತು. ಭದ್ರತಾ ದೃಷ್ಟಿಯಿಂದಾಗಿ ಮೆರವಣಿಗೆ ಪೂರ್ಣಗೊಳ್ಳುವವರೆಗೆ ಇಂಧನ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಜತೆಗೆ ಬಂಕ್‌ಗಳ ಬಳಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕಟ್ಟಡಗಳನ್ನೇರಿ ದರ್ಶನ ಪಡೆದರು
ಅಂಬರೀಶ್‌ ಅವರ ಪಾರ್ಥಿವ ಶರೀರ ಹೊತ್ತ ವಾಹನ ಸಾಗಿದ ರಸ್ತೆಯುದ್ದಕ್ಕೂ ಎರಡೂ ಬದಿಯ ಕಟ್ಟಡಗಳ ಮೇಲೆ ನಿಂತ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದುಕೊಂಡರು. ಇದರೊಂದಿಗೆ ಪಾದಚಾರಿ ಮೇಲ್ಸೇತುವೆಗಳ ಮೇಲೇರಿಸಿದ್ದ ಅಭಿಮಾನಿಗಳು ವಾಹನ ಬರುತ್ತಿದ್ದಂತೆ ಹೂ ಮಳೆ ಸುರಿಸಿ ನಮನ ಸಲ್ಲಿಸಿದರು. ಜತೆಗೆ ನೆಚ್ಚಿನ ನಟನ ಅಂತಿಮ ಯಾತ್ರೆಯ ಚಿತ್ರಣವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದುದು ಕಂಡುಬಂತು.
ಪ್ರಮುಖವಾಗಿ ಮೈಸೂರು ಬ್ಯಾಂಕ್‌ ವೃತ್ತ, ಬಸವೇಶ್ವರ ವೃತ್ತ, ಬಿಡಿಎ ಕೇಂದ್ರ ಕಚೇರಿ, ಯಶವಂತಪುರ ಮೇಲ್ಸೇತುವೆ, ಗೊರಗುಂಟೆಪಾಳ್ಯ ಹೀಗೆ ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ನೂರಾರು ಕಟ್ಟಡಗಳಲ್ಲಿ ನಿಂತು ಜನರು ಮೆರವಣಿಗೆಯನ್ನು ನೋಡಿದರು.

ದೂರದಿಂದ ಬಂದ ಅಭಿಮಾನಿಗಳು
ಅಂಬರೀಶ್‌ ಅವರ ಅಂತಿಮ ದರ್ಶನಕ್ಕಾಗಿ ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಳವಳ್ಳಿಯ ಸೋಮರಾಜು ಹಾಗೂ ಬನ್ನೂರಿನ ಆನಂದ್‌ ಸೈಕಲ್‌, ಬೈಕ್‌ ಮುಂದೆ ಅಂಬರೀಶ್‌ ಅವರ ಭಾವಚಿತ್ರ ಇಟ್ಟುಕೊಂಡು ಕಂಠೀರವ ಸ್ಟುಡಿಯೋವರೆಗೆ ಬಂದು ಯಾತ್ರೆಯಲ್ಲಿ ಸಾಗಿ ಬಂದರು.

ದೇಹದ ತುಂಬೆಲ್ಲ ಅಂಬರೀಶ್‌ ನಟನೆಯ ಸಿನಿಮಾಗಳ ಹೆಸರುಗಳನ್ನೇ ಅಚ್ಚೆ ಹಾಕಿಸಿಕೊಂಡು 40 ವರ್ಷಗಳಿಂದ ಅಭಿಮಾನಿಯಾಗಿರುವ ಚಲ್ಲಘಟ್ಟದ ನಿವಾಸಿ ಕೆ.ನಾಗೇಶ್‌ ಗೌಡ ಅಗಲಿದ ನೆಚ್ಚಿನ ನಟನನ್ನು ನೆನೆದು ಕಣ್ಣೀರು ಹಾಕಿದರು.

ಕನ್ನಡ ಬಾವುಟದ ಗೌರವ
ಯಾತ್ರೆಯುದ್ಧಕ್ಕೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕನ್ನಡದ ಬಾವುಟವನ್ನು ಹಾರಿಸುತ್ತಾ ಮೆರವಣಿಗೆಯ ಮುಂದೆ ಸಾಗಿದರು. ಅಂಬಿ ಮತ್ತೆ ಹುಟ್ಟಿ ಬಾ, ಮಂಡ್ಯದ ಗಂಡು ಬೆಂಕಿಯ ಚೆಂಡು, ಅಂಬಿ ರೆಬೆಲ್‌ ಸ್ಟಾರ್‌ ಸೇರಿದಂತೆ ಇನ್ನಿತರ ಘೋಷಣೆಗಳನ್ನು ಕೂಗಿದರು.

ಅಂತಿಮಯಾತ್ರೆಯಲ್ಲಿ ಪಾರ್ಥಿವ ಶರೀರ ಹೊತ್ತು ಸಾಗಿದ ವಾಹನವನ್ನು ವಿಶೇಷ ಹೂ ಹಾಗೂ ತುಳಸಿ ಮಾಲೆಗಳಿಂದ ಅಲಂಕರಿಸಲಾಗಿತ್ತು. ಚೆಂಡು ಹೂ, ಬಿಳಿ ಬಣ್ಣದ ಸೇವಂತಿಗೆ ಹಾಗೂ ತುಳಸಿ ಹಾರಗಳನ್ನು ತ್ರಿವರ್ಣ ಧ್ವಜ ಮಾದರಿಯಲ್ಲಿ ವಾಹನದ ಸುತ್ತಲು ಹರಡಲಾಗಿತ್ತು. ವಾಹನದ ಮುಂಭಾಗದಲ್ಲಿ ಅಂಬರೀಶ್‌ ಅವರಿಗೆ 2009ರಲ್ಲಿ ಜೀವಮಾನ ಸಾಧನೆಗೆ ನೀಡಿದ್ದ ಫಿಲ್ಮ್ಫೇರ್‌ ಪ್ರಶಸ್ತಿಯ ಛಾಯಾಚಿತ್ರವನ್ನು ದೊಡ್ಡದಾಗಿ ಹಾಕಲಾಗಿತ್ತು.

ಅಭಿಮಾನಕ್ಕೆ ಮರುಗಿದ ತಾಯಿ, ಮಗ
ಅಂಬರೀಶ್‌ ಅವರ ಪಾರ್ಥಿವ ಶರೀರವಿದ್ದ ವಾಹನದಲ್ಲಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ಗೌಡ ಹಾಗೂ ಕುಟುಂಬದವರು ಕುಳಿತಿದ್ದರು. ಅಂತಿಮ ಯಾತ್ರೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ಅಂಬಿಯವರ ದರ್ಶನ ಪಡೆಯುತ್ತಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ತಾಯಿ ಹಾಗೂ ಮಗ ಇಬ್ಬರೂ ಕೈಮುಗಿದು ನಮಸ್ಕರಿಸಿದರು.

– ವೆಂ. ಸುನೀಲ್‌ ಕುಮಾರ್‌/ ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.