ಆರಾಧನ ಮಹೋತ್ಸವಕ್ಕೆ ಸಮಾನ ಅವಕಾಶ
Team Udayavani, Dec 5, 2018, 6:00 AM IST
ಬೆಂಗಳೂರು: ಕೊಪ್ಪಳ ಜಿಲ್ಲೆಯ ಆನೆಗೊಂದಿಯ ನವ ವೃಂದಾವನದಲ್ಲಿ ಬುಧವಾರ (ಡಿ.5)ದಿಂದ ಮೂರು ದಿನ ಪದ್ಮನಾಭ ತೀರ್ಥರ 694ನೇ ಆರಾಧನಾ ಮಹೋತ್ಸವ ನಡೆಸಲು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಉತ್ತರಾದಿ ಮಠಕ್ಕೆ ಹೈಕೋರ್ಟ್ ಸಮಾನ ಅವಕಾಶ ಮಾಡಿ ಕೊಟ್ಟಿದೆ. ತಲಾ ಒಂದೂವರೆ ದಿನ ಆರಾಧನೆ ನಡೆಸುವಂತೆ ಉಭಯ ಮಠಗಳಿಗೆ ಮಂಗಳವಾರ ಆದೇಶಿಸಿದೆ.
ಆರಾಧನೆ ನೆರವೇರಿಸಲು ಮೊದಲು ತಮಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಮಂತ್ರಾಲಯ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆ ಸಿದ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಾಂತರ ತೀರ್ಪು ಪ್ರಕಟಿಸಿತು. ಅದರಂತೆ, ಡಿ.5ರ ಪೂರ್ತಿ ದಿನ ಹಾಗೂ ಡಿ.6ರ ಅಪರಾಹ್ನ 3 ಗಂಟೆಯ ವರೆಗೆ ಮಂತ್ರಾಲಯ ಮಠದ ಸುಬು ಧೇಂದ್ರತೀರ್ಥ ಸ್ವಾಮೀಜಿ ಆರಾ ಧನೆ ನಡೆಸಬೇಕು. ಡಿ. 6ರ ಅಪರಾಹ್ನ 3 ಗಂಟೆ 1 ನಿಮಿಷದಿಂದ ಡಿ.7ರ ಪೂರ್ತಿ ದಿನ ಉತ್ತರಾದಿ ಮಠದ ಸತ್ಯಾರ್ಥತೀರ್ಥ ಸ್ವಾಮೀಜಿ ಆರಾಧನೆ ನೆರವೇರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೆ ಆರಾಧನೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನ್ಯಾಯ ಮೂರ್ತಿಗಳು ನಿರ್ದೇಶನ ನೀಡಿದರು. ಇದೇ ನ. 26ರ ಸುಪ್ರೀಂ ಕೋರ್ಟ್ ಆದೇಶದಂತೆ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಹೊರಡಿಸಲಾಗಿದ್ದ ಕರಡು ಅಂಶಗಳನ್ನು ಹೈಕೋರ್ಟ್ಗೆ ಹಾಜರು ಪಡಿಸುವಂತೆ ಸೂಚಿಸಿ ವಿಚಾರಣೆ ಯನ್ನು ಡಿ.10ಕ್ಕೆ ಮುಂದೂಡಿದರು.
ಸುದೀರ್ಘ ವಿಚಾರಣೆ
ಅರ್ಜಿಗೆ ಸಂಬಂಧಿಸಿದಂತೆ ಮಂಗಳ ವಾರ ಬೆಳಗ್ಗೆ ಸುದೀರ್ಘ 3 ತಾಸು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಸಂಜೆ ತೀರ್ಪು ಪ್ರಕಟಿಸಿದರು. ಮಂತ್ರಾಲಯ ಮಠದ ಕೆ. ಸುಮನ್ ಹಾಗೂ ಉತ್ತರಾದಿ ಮಠದ ಪರ ಹಿರಿಯ ವಕೀಲ ಜಯವಿಟ್ಟಲ ರಾವ್ ವಾದ ಮಂಡಿಸಿದರು.