ರಾಜ್ಯದ ರೈತರು ಇನ್ಮುಂದೆ “ಋಣಮುಕ್ತ’:ಎಚ್ಡಿಕೆ
Team Udayavani, Dec 9, 2018, 6:00 AM IST
ಬೆಂಗಳೂರು: ರಾಜ್ಯದ ಲಕ್ಷಾಂತರ ರೈತರ ಬಹುನಿರೀಕ್ಷಿತ “ಸಾಲಮನ್ನಾ ಯೋಜನೆ’ಗೆ ಶನಿವಾರ ಅಧಿಕೃತ ಚಾಲನೆ ದೊರೆಯಿತು.
ಈ ಯೋಜನೆಯಿಂದ ಇನ್ಮುಂದೆ ಬ್ಯಾಂಕ್ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಸಾಲ ವಸೂಲಾತಿಗಾಗಿ ಬರುವುದಿಲ್ಲ. ಬದಲಿಗೆ ಸಾಲದಿಂದ ವಿಮೋಚನೆ ಮಾಡಿರುವುದನ್ನು ಖಾತ್ರಿಪಡಿಸುವ “ಋಣಮುಕ್ತ ಪತ್ರ’ ನೀಡಲು ಆಗಮಿಸಲಿದ್ದಾರೆ. ಈ ಪತ್ರದಲ್ಲಿ ಆಯಾ ರೈತರ ಹೆಸರು, ಬ್ಯಾಂಕ್ ಖಾತೆ, ಪಾವತಿಸಿದ ಸಾಲದ ಮೊತ್ತ, ಸರ್ಕಾರ ಪಾವತಿಸಲಿರುವ ಬಾಕಿ ಮೊತ್ತ ಸೇರಿ ಸಂಪೂರ್ಣ ಮಾಹಿತಿ ಇರಲಿದೆ. ಸುಮಾರು 40 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದ ರೈತರಿಗೆ ಋಣಮುಕ್ತ ಪತ್ರವನ್ನು ನೀಡುವ ಮೂಲಕ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದರು.
ಫಲಾನುಭವಿ ರೈತರಿಗೆ ಋಣಮುಕ್ತ ಪತ್ರ ಪ್ರದಾನ ಮಾಡಿ ಮಾತನಾಡಿದ ಅವರು, “”ರೈತರ ಸಾಲಮನ್ನಾ ವಿಚಾರದಲ್ಲಿ ಜನರಲ್ಲಿ ಅನುಮಾನದ ಬೀಜ ಬಿತ್ತುತ್ತಿರುವವರಿಗೆ ದೊಡ್ಡಬಳ್ಳಾಪುರದ ಮೂಲಕ ಮೈತ್ರಿ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿದೆ. ಇದು ರೈತರ ಬಗ್ಗೆ ನಮಗಿರುವ ಬದ್ಧತೆ ಮತ್ತು ಗೌರವ. ಅದನ್ನು ದಯವಿಟ್ಟು ಅನುಮಾನದಿಂದ ನೋಡಬೇಡಿ. ಅಂತಹ ಮಾತುಗಳಿಗೂ ಕಿವಿಗೊಡಬೇಡಿ” ಎಂದು ಮನವಿ ಮಾಡಿದರು.
ಅಂದಾಜು 40 ಲಕ್ಷ ರೈತರ ಒಟ್ಟಾರೆ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆದ ರೈತರ ಸಂಖ್ಯೆ 21 ಲಕ್ಷ. ಇನ್ನು ಈ ಪೈಕಿ ಒಂದೂವರೆ ಲಕ್ಷ ರೈತರ ಸಾಲ 50 ಸಾವಿರ ರೂ. ಒಳಗಿದ್ದು, ಉಳಿದವರು 50 ಸಾವಿರ ಮೇಲ್ಪಟ್ಟು ಸಾಲ ಪಡೆದಿ¨ªಾರೆ. ಸಾಲ ಪಾವತಿಸಿದ ಎರಡೂವರೆ ಲಕ್ಷ ರೈತರಿಗೂ 25 ಸಾವಿರ ರೂ. ಪೋ›ತ್ಸಾಹಧನ ನೀಡಲಾಗುತ್ತಿದೆ. ಈ ಯೋಜನೆ ಫಲ ನಿಜವಾದ ರೈತರಿಗೆ ಸಿಗಬೇಕು, ಮಧ್ಯವರ್ತಿ ಅಥವಾ ಅನರ್ಹರ ಪಾಲಾಗಬಾರದು ಎಂಬ ಕಾರಣಕ್ಕೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ರೈತರ ಸಾಲದ ಮಾಹಿತಿಯನ್ನು ಆ ತಂತ್ರಜ್ಞಾನದಲ್ಲಿ ಅಳವಡಿಸಲಾಗಿದೆ. ಈ ಕಾರ್ಯದಿಂದಾಗಿಯೇ ಯೋಜನೆ ಜಾರಿಗೊಳಿಸಲು ಸ್ವಲ್ಪ ಸಮಯ ಹಿಡಿಯಿತು ಎಂದೂ ಅವರು ಸ್ಪಷ್ಟಪಡಿಸಿದರು.
ಬ್ಯಾಂಕ್ಗಳ ಅಸಹಕಾರಕ್ಕೆ ಬೇಸರ:
2017ರ ಜೂನ್ನಲ್ಲಿ ಎನ್ಪಿಎ (ಅನುತ್ಪಾದಕ ಆಸ್ತಿ) ಪಟ್ಟಿಯಲ್ಲಿರುವ ರೈತರು ಸಾಲ ಮರುಪಾವತಿ ಮಾಡಿದರೆ, ಶೇ. 50ರಷ್ಟು ರಿಯಾಯ್ತಿ ಜತೆಗೆ ಬಡ್ಡಿ ಕೂಡ ವಿನಾಯ್ತಿ ಮಾಡುವುದಾಗಿ ಜಾಹೀರಾತು ನೀಡಿದ ಬ್ಯಾಂಕ್ಗಳೇ ಇಂದು ಸ್ವತಃ ಸರ್ಕಾರ ಸಾಲ ಮರುಪಾವತಿಸಲು ಮುಂದಾದರೂ ಪೂರಕವಾಗಿ ಸ್ಪಂದಿಸುತ್ತಿಲ್ಲ. ಎಷ್ಟು ರಿಯಾಯ್ತಿ ನೀಡುತ್ತಾರೆ ಎಂಬುದರ ಬಗ್ಗೆ ಈವರೆಗೂ ನಿಖರವಾಗಿ ಹೇಳುತ್ತಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾತನಾಡಿ, ಮೈತ್ರಿ ಸರ್ಕಾರದ ಬಗ್ಗೆ ಟೀಕಿಸುವವರಿಗೆ ಇದು ಸೂಕ್ತ ಸಂದೇಶವಾಗಿದೆ. ಸರ್ಕಾರಿ ದಿವಾಳಿಯಾಗಿದ್ದು, ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷದ ನಾಯಕರು ಟೀಕಿಸುತ್ತಿದ್ದಾರೆ. ಖಜಾನೆ ಖಾಲಿಯಾಗಿದ್ದರೆ, 40 ಸಾವಿರ ಕೋಟಿ ರೂ. ಮನ್ನಾ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ತಿರುಗೇಟು ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಸರ್ಕಾರ ಸುಮ್ಮನೆ ಕುಳಿತಿರಲಿಲ್ಲ. ಸಾಲ ಮನ್ನಾ ಯೋಜನೆ ಅನರ್ಹರ ಪಾಲಾಗಿ, ರೈತರು ವಂಚಿತರಾಗದಿರಲು ಸೂಕ್ತ ವ್ಯವಸ್ಥೆ ರೂಪಿಸುವ ಕಾರ್ಯ ನಡೆದಿತ್ತು ಎಂದರು.
ಸಚಿವರಾದ ಡಿ.ಕೆ. ಶಿವಕುಮಾರ್, ಎನ್.ಎಚ್. ಶಿವಶಂಕರರೆಡ್ಡಿ, ಸಂಸದ ಡಾ.ಎಂ. ವೀರಪ್ಪ ಮೊಯ್ಲಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ, ಎಸ್. ರವಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷ ತ.ನ. ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮೀ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಚ್.ವಿ. ಶ್ರೀವತ್ಸ, ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಎಪಿಎಂಸಿ ಅಧ್ಯಕ್ಷ ಕೆ.ವಿ. ಮಂಜುನಾಥ್, ಸಹಕಾರ ಸಂಘಗಳ ನಿಬಂಧಕ ಎಂ.ಕೆ. ಅಯ್ಯಪ್ಪ, ಜಿಲ್ಲಾ ಧಿಕಾರಿ ಕರೀಗೌಡ, ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್, ಸಿಇಒ ಆರ್. ಲತಾ ಮತ್ತಿತರರು ಉಪಸ್ಥಿತರಿದ್ದರು.
ರೈತರನ್ನು ಉಳಿಸಲು ಕೇಂದ್ರ ಸರ್ಕಾರ ತಮಗೆ ದುಡ್ಡಿನ ಯಂತ್ರ ಕೊಟ್ಟಿಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ನಾನು ರೈತರ ಕಾಳಜಿ ಬಗ್ಗೆ ಪಾಠ ಹೇಳಿಸಿಕೊಳ್ಳಬೇಕಾ?
– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಬಿಜೆಪಿ ರ್ಯಾಲಿ ವಿರುದ್ಧ ಕಿಡಿ
“ಏನ್ ಕಿತ್ತುಗುಡ್ಡೆ ಹಾಕಿದ್ದೀರಾ ಅಂತ ರೈತರ ರ್ಯಾಲಿ ಮಾಡಲು ಹೊರಟಿದ್ದೀರಾ’ ಎಂದು ಬಿಜೆಪಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು. “ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಲಕ್ಷ ರೈತರನ್ನು ಸೇರಿಸಿ ಬೃಹತ್ ರ್ಯಾಲಿ ಮಾಡಲು ಬಿಜೆಪಿ ಮುಂದಾಗಿದೆ. ಆದರೆ, ಅಲ್ಲಿ ದೆಹಲಿಯಲ್ಲಿ ಈಚೆರೆ ಇಡೀ ದೇಶದ ರೈತರು ಒಟ್ಟಾಗಿ ನಿರಂತರ ಪ್ರತಿಭಟನೆ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಹಾಗೂ ಕೇಂದ್ರ ಸಚಿವರಾಗಲಿ ಅವರತ್ತ ತಿರುಗಿ ನೋಡಲಿಲ್ಲ. ಇಲ್ಲಿ ನೀವು (ರಾಜ್ಯ ಬಿಜೆಪಿ ನಾಯಕರು) ಏನು ಕಿತ್ತುಗುಡ್ಡೆ ಹಾಕಿದ್ದೀರಿ ಅಂತ ರ್ಯಾಲಿ ಮಾಡಲು ಹೊರಟಿದ್ದೀರಿ” ಎಂದು ಪ್ರಶ್ನಿಸಿದರು.
ಸೇಡಂನಲ್ಲಿ ಸಚಿವ ಖಾಶೆಂಪೂರ ಚಾಲನೆ
ಕಲಬುರಗಿಯ ಸೇಡಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮಾರುಕಟ್ಟೆ ಸಚಿವ ಬಂಡೆಪ್ಪ ಖಾಶೆಂಪೂರ ಯೋಜನೆಗೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನಷ್ಟು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಿದೆ. ಸಹಕಾರಿ ಸಂಘಗಳ ಕಾರ್ಯದರ್ಶಿಗಳು ನಡೆಸುವ ಅವ್ಯವಹಾರ ತಡೆಗಟ್ಟಲು ಸಾಲ ಮನ್ನಾಕ್ಕೆ ದಾಖಲೆ ಪತ್ರ ಪಡೆಯಲಾಗುತ್ತಿದೆ. ಇದಕ್ಕಾಗಿ ರೈತರು ಸಹಕರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ