ನನಗೆ ರಾಮಮಂದಿರ ನೋಡುವಾಸೆ: ಪೇಜಾವರ ಶ್ರೀ
Team Udayavani, Dec 10, 2018, 6:15 AM IST
ಶಿವಮೊಗ್ಗ: ನ್ಯಾಯಾಲಯದ ಹೊರಗೆ ಮಾತುಕತೆ, ಗೊತ್ತುವಳಿ ಸ್ವೀಕಾರ ಅಥವಾ ಸುಗ್ರೀವಾಜ್ಞೆ…ಈ ಮೂರರಲ್ಲಿ ಯಾವುದಾದರೂ ಒಂದು ಅಂಶದ ಮೂಲಕ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆಗ್ರಹಿಸಿದರು.
ನಗರದಲ್ಲಿ ಮಾತನಾಡಿ, ನಮ್ಮದು ಹನುಮ ಹುಟ್ಟಿದ ರಾಜ್ಯ. ಅಂದು ರಾಮನಿಗೆ ಹನುಮ ಸಹಾಯ ಮಾಡಿದ. ಇಂದು ನಾವು ರಾಮ ಮಂದಿರಕ್ಕಾಗಿ ಹನುಮನ ರೀತಿ ಹೋರಾಟ ಮಾಡಬೇಕಿದೆ. ರಾಮಮಂದಿರ ನಿರ್ಮಾಣವಾಗುವವರೆಗೂ ನನಗೆ ವಿಶ್ರಾಂತಿ ಇಲ್ಲ. 88 ವರ್ಷದ ನನಗೆ ರಾಮಮಂದಿರ ನೋಡುವ ಆಸೆ ಇದೆ. ಒಂದೊಮ್ಮೆ ಕೇಂದ್ರ ಸರ್ಕಾರ ಮಂಡಿಸುವ ಸುಗ್ರೀವಾಜ್ಞೆ ಸಂಸತ್ನಲ್ಲಿ ವಿಫಲವಾದರೆ ಜನಮತ ಪಡೆದು ಮಂದಿರ ನಿರ್ಮಾಣ ಮಾಡಲಿ ಎಂದರು. ಅನಾವಶ್ಯಕ ಘರ್ಷಣೆಗೆ ಅವಕಾಶ ಕೊಡಬೇಡಿ. ಸಾರ್ವತ್ರಿಕ ಮತಗಣನೆ ಮಾಡಿ ಮಂದಿರ ಕಾರ್ಯ ಆಗಬೇಕು. ಈ ವರ್ಷವೇ ಆಗಬೇಕು. ರಾಮ ಮಂದಿರ ಪ್ರೇಮದಿಂದ ಆಗಬೇಕು ಎಂದರು.