ಎಲ್ಲವನ್ನೂ ಬಿಟ್ಟು ನಿಂತ ಕುಮಾರಸ್ವಾಮಿ: ಬಿಎಸ್ವೈ
Team Udayavani, Dec 10, 2018, 6:00 AM IST
ಬೆಳಗಾವಿ: ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸಮ್ಮಿಶ್ರ ಸರ್ಕಾರದ ಯಾವೊಬ್ಬ ಸಚಿವರೂ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಬೆಳಗಾವಿ ಹೊರವಲಯದ ಅಲಾರವಾಡ ಕ್ರಾಸ್ ಬಳಿ ಸೋಮವಾರ ನಡೆಯಲಿರುವ ಬೃಹತ್ ರೈತ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ರಾಜ್ಯ ಸರ್ಕಾರ ಸತ್ತಿದೆ. ಅವರಿಗೆ ಆಡಳಿತ ನಡೆಸಲು ಯಾವುದೇ ನೈತಿಕತೆ ಇಲ್ಲ. ಸಾಲ ಮನ್ನಾ ಮಾಡುತ್ತೇವೆ ಎಂದು ಕುಂಟು ನೆಪ ಹೇಳುತ್ತಿದೆ. ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಬಿದ್ದಿದೆ. ಆದರೂ, ಸರ್ಕಾರದಿಂದ ಯಾವುದೇ ಪರಿಹಾರ ಕ್ರಮ ಇಲ್ಲ. ನೀರಾವರಿ ಹಾಗೂ ಹಿಂದುಳಿದ ವರ್ಗದವರ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದರು.
ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಿಜೆಪಿಯಿಂದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಿಎಂ ಕುಮಾರಸ್ವಾಮಿಯವರು ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ರೈತ ಹೋರಾಟಗಾರರನ್ನು ಗೂಂಡಾಗಳೆಂದು ಕರೆದಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇಂತಹ ರೈತ ವಿರೋಧಿ ಸರ್ಕಾರಕ್ಕೆ ಪಾಠ ಕಲಿಸಲು ರಣತಂತ್ರ ರೂಪಿಸಿದ್ದೇವೆ. ಈ ಭಾಗದಲ್ಲಿ ರೈತ ಮಹಿಳೆಯರು ಸಾವಿಗೀಡಾದರೆ ಮುಖ್ಯಮಂತ್ರಿಗಳು ಪರಿಹಾರ ನೀಡುವುದಿಲ್ಲ. ಆದರೆ, ಮಂಡ್ಯ ಭಾಗದಲ್ಲಿ ಇದೇ ಘಟನೆ ನಡೆದರೆ ಅಲ್ಲಿ ಪರಿಹಾರ ವಿತರಿಸಲಾಗುತ್ತಿದೆ. ಇದು ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿರುವುದಕ್ಕೆ ಉದಾಹರಣೆ ಎಂದರು.