ಚಿರತೆ ದಾಳಿಗೆ ಆಡುತ್ತಿದ್ದ ಮಗು ಬಲಿ!
Team Udayavani, Dec 12, 2018, 6:00 AM IST
ಕಂಪ್ಲಿ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಚಿರತೆ ಹೊತ್ತೂಯ್ದ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ
ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಗು ಹೊತ್ತೂಯ್ದ ಚಿರತೆಯನ್ನು ಗ್ರಾಮಸ್ಥರು
ಬೆನ್ನಟ್ಟಿದರೂ ಅದು ತಪ್ಪಿಸಿಕೊಂಡಿದ್ದು ಸಮೀಪದ ಗುಡ್ಡದಲ್ಲಿ ಬಾಲಕನ ಮೃತದೇಹ ಸಿಕ್ಕಿದೆ. ನಾಡೋಜ ದರೋಜಿ ಈರಮ್ಮ ಅವರ
ಮರಿ ಮೊಮ್ಮಗ ಅಶ್ವ ರಾಘವೇಂದ್ರ ಎಂಬುವವರ ಪುತ್ರ ಅಶ್ವ ವೆಂಕಟಸ್ವಾಮಿ ಚಿರತೆ ದಾಳಿಯಿಂದ ಮೃತಪಟ್ಟ ಬಾಲಕ.
ನಾಯಿ ಅಂದುಕೊಂಡರು: ಸೋಮಲಾಪುರ ಗ್ರಾಮದ ಸಮೀಪದಲ್ಲೇ ಗುಡ್ಡವೊಂದಿದ್ದು, ಇಲ್ಲಿ ಚಿರತೆ ಹಾಗೂ ಕರಡಿಗಳುವಾಸಿಸುತ್ತಿವೆ. ಮಂಗಳವಾರ ಸಂಜೆ ಸಹ ಗುಡ್ಡದಿಂದ ಕೆಳಗಿಳಿದ ಚಿರತೆ ಗ್ರಾಮಕ್ಕೆ ಬಂದಿದೆ. ಈ ವೇಳೆ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದು, ಚಿರತೆ ಬಂದಿದ್ದು ಇವರ ಗಮನಕ್ಕೆ ಬಂದಿಲ್ಲ. ಅಲ್ಲದೆ ಬೀದಿ ನಾಯಿ ಮನೆಯ ಹತ್ತಿರ ಓಡಾಡುತ್ತಿದೆ ಎಂದೇ ಗ್ರಾಮಸ್ಥರು ಭಾವಿಸಿದ್ದಾರೆ. ಆದರೆ ಮನೆ ಅಂಗಳಕ್ಕೇ ಬಂದ ಚಿರತೆ ಬಾಲಕನ ಮೇಲೆ ಎರಗಿದ್ದು, ಕುತ್ತಿಗೆಗೆ ಬಾಯಿ ಹಾಕಿದೆ. ಆಗ ಬಾಲಕ ಕಿರುಚಿಕೊಂಡಿದ್ದು ಆಟವಾಡುತ್ತಿದ್ದವರೆಲ್ಲ ಹೆದರಿ ಓಡಿದ್ದಾರೆ. ಅಷ್ಟರಲ್ಲಿ ಚಿರತೆ ಬಾಲಕನನ್ನು ಹೊತ್ತೂಯ್ದಿದೆ. ಬಾಲಕ
ಕಿರುಚಿಕೊಂಡಿದ್ದರಿಂದ ಮನೆಯವರು ಓಡಿ ಬಂದಾಗ ಚಿರತೆ ಬಂದಿದ್ದು ತಿಳಿದಿದೆ. ತಕ್ಷಣ ಗ್ರಾಮಸ್ಥರು ಚಿರತೆಯನ್ನು ಬೆನ್ನಟ್ಟಿದ್ದಾರೆ.
ಆದರೆ ಗುಡ್ಡ ಸೇರಿದ ಚಿರತೆ ಬಾಲಕನ ರಕ್ತ ಹೀರಿ ಮೃತದೇಹ ಬಿಟ್ಟು ನಾಪತ್ತೆಯಾಗಿದೆ. ಚಿರತೆಗಾಗಿ ಗುಡ್ಡದಲ್ಲಿ ಹುಡುಕಾಡಿದಾಗ
ಮಗುವಿನ ಮೃತ ದೇಹ ಪತ್ತೆಯಾಗಿದೆ. ಕಂಪ್ಲಿ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.